ಚಿಕ್ಕೋಡಿ: ‘ಕೆರೆಯನ್ನು ಕಟ್ಟಿಸು. ಬಾವಿಯನ್ನು ಸವೆಸು….’ ಎಂದು ಕನ್ನಡ ಶಾಸನವೊಂದರಲ್ಲಿ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಕೆರೆ ಕಟ್ಟಿಸುವುದಿರಲಿ, ಇರುವ ಕೆರೆ ಸಂರಕ್ಷಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ ಎಂಬುದಕ್ಕೆ ಪಟ್ಟಣದ ಹೊರವಲಯದಲ್ಲಿರುವ ಹಾಲಟ್ಟಿ ಕೆರೆ ಸಾಕ್ಷಿ.
ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಸೇರಿದ 39 ಎಕರೆ ಜಾಗದಲ್ಲಿ ಹರಡಿಕೊಂಡಿರುವ ಹಾಲಟ್ಟಿ ಕೆರೆ ಚಿಕ್ಕೋಡಿ ಪಟ್ಟಣದ ಪ್ರಮುಖ ಹಾಗೂ ಏಕೈಕ ಕೆರೆ. ಶತಮಾನದ ಹಿಂದಿನ ಈ ಕೆರೆಗೆ ಆಗೊಮ್ಮೆ, ಈಗೊಮ್ಮೆ ಕಾಯಕಲ್ಪ ನೀಡಿದ್ದು ಬಿಟ್ಟರೆ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸವಾಗಿಲ್ಲ.
ಈ ಪ್ರಮುಖ ಜಲಮೂಲವನ್ನು ಬೆಟ್ಟಗಳು ಸುತ್ತುವರಿದಿದ್ದು, ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಕೆರೆಗೆ ಹರಿದು
ಬರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆ
ಯಾಗಿದ್ದರಿಂದ ಕೆರೆ ಅರ್ಧದಷ್ಟು ಸಹ ಭರ್ತಿಯಾಗುತ್ತಿಲ್ಲ. ಹಾಗಾಗಿ ₹9 ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮಾಡಿ, 20 ಕಿ.ಮೀ ದೂರದಲ್ಲಿರುವ ಕೃಷ್ಣಾ ನದಿಯಿಂದ ನೀರು ಪೂರೈಸಿ ಕೆರೆ ತುಂಬಿಸಲಾಗುತ್ತಿದೆ.
ಹಿಂದಿನ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರು, 2023ರ ಸೆಪ್ಟೆಂಬರ್ನಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಕೆರೆ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದರು. ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅಭಿಯಾನದ ಯಶಸ್ಸಿಗೆ ಕೈಜೋಡಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಮಾಧವ ಗಿತ್ತೆ ವರ್ಗಾವಣೆಯಾದ ಕಾರಣ, ಈ ಯೋಜನೆ ಹಳ್ಳ ಹಿಡಿದಿದೆ.
ಕೆರೆ ಬತ್ತಿರುವುದರಿಂದ ಸುತ್ತಲಿನ ಪರಿಸರದಲ್ಲಿರುವ ಹಳ್ಳ-ಕೊಳ್ಳಗಳು, ತೆರೆದ ಬಾವಿಗಳು ಮತ್ತು ಕೊಳವೆಬಾವಿಗಳು ಬರಿದಾಗಿವೆ. ‘ಕೆಲವರು ಕೆರೆ ಅತಿಕ್ರಮಣ ಮಾಡುತ್ತಿದ್ದಾರೆ. ಇದನ್ನು ತಡೆದು, ಕೆರೆ ಅಭಿವೃದ್ಧಿಪಡಿಸಬೇಕು. ಪ್ರವಾಸಿಗರನ್ನು ಆಕರ್ಷಿಸಲು ಬೋಟಿಂಗ್ ವ್ಯವಸ್ಥೆ ಮಾಡಬೇಕು. ಕೆರೆ ಸೌಂದರ್ಯೀಕರಣಕ್ಕೆ ಒತ್ತು ನೀಡಬೇಕು’ ಎಂಬ ಒತ್ತಾಯ ಜನರದ್ದು.
ಅಣ್ಣಪ್ಪ ಲಿಂಬಿಗಿಡದ, ಸ್ಥಳೀಯಹಾಲಟ್ಟಿ ಕೆರೆ ನೆಚ್ಚಿಕೊಂಡು, ಇಲ್ಲಿ ಬಹುತೇಕರು ಹೈನುಗಾರಿಕೆ ಮಾಡುತ್ತಿದ್ದರು. ವರ್ಷಪೂರ್ತಿ ಕೆರೆ ತುಂಬಿರುತ್ತಿದ್ದ ಕಾರಣ, ಹಳ್ಳ-ಕೊಳ್ಳಗಳಲ್ಲಿ ನೀರು ಇರುತ್ತಿತ್ತು. ಈಗ ಕೆರೆ ಬತ್ತಿದ್ದರಿಂದ ಎಲ್ಲರಿಗೂ ತೊಂದರೆಯಾಗಿದೆಮಹಾಂತೇಶ ನಿಡವಣಿ, ಮುಖ್ಯಾಧಿಕಾರಿ, ಚಿಕ್ಕೋಡಿ ಪುರಸಭೆಹಾಲಟ್ಟಿ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಸೌಂದರ್ಯೀಕರಣ ಮಾಡುವ ಚಿಂತನೆ ನಡೆದಿದ್ದು, ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ