ಹಾನಗಲ್: ಹಾನಗಲ್ ತಾಲ್ಲೂಕಿನ ಮಾವಿನ ತೋಟಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದ ಉತ್ಕೃಷ್ಟ ರುಚಿಯ ಆಪೂಸ್ ಮಾವು ಇಳುವರಿ ಹವಾಮಾನ ವೈಪರಿತ್ಯ ಕಾರಣದಿಂದ ಕಡಿಮೆಯಾಗುತ್ತಿದೆ.
ಎರಡು ವರ್ಷ ಅಧಿಕ ಮಳೆ, ಇಬ್ಬನಿ ಕಾಟ, ಈ ವರ್ಷ ಉಷ್ಣಾಂಶ ಹೆಚ್ಚಳದ ಪರಿಣಾಮ ಮಾವು ಇಳುವರಿಯಲ್ಲಿ ಇಳಿಮುಖವಾಗಿದೆ.
ತಾಲ್ಲೂಕಿನಲ್ಲಿ 3500 ಹೆಕ್ಟರ್ ಮಾವು ಬೆಳೆಯಲಾಗುತ್ತದೆ. ಮಳೆ ಅಭಾವ ಹೊರತುಪಡಿಸಿದರೆ, ಈಗಲೂ ಹಾನಗಲ್ ಹವಾಗುಣ ಮಾವು ಬೆಳೆಗೆ ಉತ್ತಮವಾಗಿದೆ ಎಂಬ ವರದಿ ತೋಟಗಾರಿಕೆ ಇಲಾಖೆ ಹೊಂದಿದೆ. ಆದರೆ ಮಾವು ಬೆಳೆಗಾರರು ಅಡಿಕೆ ತೋಟಗಳತ್ತ ಆಕರ್ಷಿತರಾಗಿ ಮಾವು ಬೆಳೆಯಿಂದ ವಿಮುಖರಾಗುತ್ತಿದ್ದಾರೆ.
ಮುಖ್ಯವಾಗಿ ಆಪೂಸ್ ಮಾವು ಅಧಿಕ ಇಳುವರಿ ಮತ್ತು ರುಚಿಯ ಉತ್ಕೃಷ್ಟತೆ ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಬೇಕಾದ ಅಗತ್ಯವಿದೆ. ತೋಟಗಾರಿಕೆ ಇಲಾಖೆಯ ಸಸ್ಯ ಸಂರಕ್ಷಣಾ ಕ್ರಮಗಳ ಜೊತೆಯಲ್ಲಿ ಆಗಾಗ ಮಾವಿನ ತೋಟಗಳಿಗೆ ನೀರುಣಿಸುವ ವ್ಯವಸ್ಥೆಯಾದಾಗ ಮಾವು ಇಳುವರಿ ಸುಧಾರಣೆಗೊಳ್ಳಬಹುದು ಎಂಬುದು ಪರಿಣತರ ಅಭಿಮತ.
ಮಾವು ತೋಟ ಮಾಡಿದ ಹೊಸತರಲ್ಲಿ ಬೆಳೆ ಜೋಪಾನ ಮಾಡುವ ಕಾಳಜಿಯನ್ನೇ ಮುಂದುವರಿಸಿಕೊಂಡು ಬಂದ ತೋಟಗಾರರು ಈಗಲೂ ಉತ್ತಮ ಇಳುವರಿ ಪಡೆಯುತ್ತಿರುವುದು ಹಾನಗಲ್ ಭಾಗದಲ್ಲಿ ಕಾಣಬಹುದು.
ಜನವರಿ ಸಮಯದಲ್ಲಿ ಮಾವಿನ ತೋಟದಲ್ಲಿ ಹೂವು ಅರಳಿ ಕಾಯಿ ಕಚ್ಚಿಕೊಳ್ಳುವ ವೇಳೆಗಾಗಲೇ ವ್ಯಾಪಾರಸ್ಥರಿಗೆ ತೋಟವನ್ನು ಲೀಸ್ ಕೊಡುವ ಪದ್ಧತಿ ಬೆಳೆಯುತ್ತಿದ್ದು, ಸಾಕಷ್ಟು ಸಂರಕ್ಷಣಾ ಕ್ರಮಗಳು ಇಲ್ಲದಂತಾಗಿ ಇಳುವರಿ ಕೂಡ ಇಳಿಮುಖವಾಗಲು ಕಾರಣವಾಗುತ್ತಿದೆ.
ತಾಲ್ಲೂಕಿನಲ್ಲಿ ಕಳೆದ ವರ್ಷ ಮಾವು ಬೆಳೆ ಇಳುವರಿ ನೆಲಕಚ್ಚಿತ್ತು. ಮಂಜು ಅಧಿಕವಾಗಿ ಮರದಲ್ಲಿ ಹೂವು ಉದುರತೊಡಗಿತ್ತು. ಈ ವರ್ಷ ಹೆಚ್ಚು ಇಳುವರಿಯ ನಿರೀಕ್ಷೆ ಹೊಂದಲಾಗಿತ್ತು. ಗಿಡದಲ್ಲಿ ಹೂವು ಕಾಣಸಿಕೊಂಡಿದ್ದವು. ಆದರೆ ಅಧಿಕ ಉಷ್ಣಾಂಶ ಮತ್ತೆ ಮಾವು ಬೆಳೆಗೆ ಕಂಟಕವಾಗಿದೆ.