ವಿಜಯಪುರ : ಬಂಜಾರ ಸಮಾಜದ ಕುರಿತು ಅತ್ಯಂತ ಕೀಳಾಗಿ ಮಾತನಾಡಿರುವ ಸಂಸದರೂ ಆಗಿರುವ ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿಕೆಯನ್ನು ಬಂಜಾರ ಸಮಾಜ ಖಂಡಿಸಿದೆ. ಅಲ್ಲದೇ ಚುನಾವಣೆಯಲ್ಲಿ ಜಿಣಜಿಣಗಿಗೆ ಬಂಜಾರ ಸಮಾಜ ಮತ ಹಾಕದಂತೆ ನಿರ್ಧರಿಸಿದ್ದಾಗಿ ಹೇಳಿದೆ.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂಸದ ರಮೇಶ ಜಿಗಜಿಣಗಿ ಹೇಳಿಕೆಯನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಅಖಿಲ ಕರ್ನಾಟಕ ಬಂಜಾರಾ ಮಹಾಸಭಾ ಅಧ್ಯಕ್ಷ ಅರ್ಜುನ ರಾಠೋಡ, ಸಮಾಜದ ಬಗ್ಗೆ ಕೀಳಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಎಂದರು.
11 ಬಾರಿ ಚುನಾವಣೆಯಲ್ಲಿ ಗೆದ್ದಿರುವ ಜಿಗಜಿಣಗಿ ಅವರು ನಮ್ಮ ಸಮಾಜದ ಬಗ್ಗೆ ಅಪಮಾನ, ಸೊಕ್ಕಿನ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ವಿಜಯಪುರ ಮೀಸಲು ಕ್ಷೇತ್ರದ ಬಂಜಾರರ ಪ್ರತಿ ಮನೆ ಮನೆಗೆ ತೆರಳಿ ನಮ್ಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಜಿಗಜಿಣಗಿ ಅವರಿಗೆ ಮತ ಹಾಕದಂತೆ ಮನವಿ ಮಾಡುತ್ತೇವೆ ಎಂದರು.
ಬಂಜಾರ ಸಮಾಜದವರು ಬಿಜೆಪಿ ಪಕ್ಷದಿಂದ ತಮ್ಮ ಸಮುದಾಯದ ಡಾ.ಬಾಬುರಾಜೇಂದ್ರ ನಾಯಕಗೆ ಟಿಕೆಟ್ ಕೊಡುವಂತೆ ಆಗ್ರಹಿಸಿ, ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಷಯವೇ ಆದರೂ, ನಮ್ಮ ಸಮಾಜದ ವೋಟ್ ಕೇಳಿದೆವಾ ಎಂಬ ಹೇಳಿಕೆ ಮೂಲಕ ಜಿಗಜಿಣಗಿ ಅಪಮಾನ ಮಾಡಿದ್ದಾರೆ ಎಂದರು.
ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಂಜಾರಾ ಸಮಾಜದ ಜನರು ತಮ್ಮ ಸಮಾಜದ ನಾಯಕನಿಗಾಗಿ ಹಕ್ಕು ಕೇಳಿದ್ದಾರೆ. ಇದನ್ನು ವಿರೋಧಿಸುವ ಭರದಲ್ಲಿ ಬಿಜೆಪಿ ಘೋಷಿತ ಅಭ್ಯರ್ಥಿಯೂ ಆಗಿರುವ ಸಂಸದ ರಮೇಶ ಜಿಗಜಿಣಗಿ ಬಂಜಾರ ಸಮುದಾಯದ ಮತವನ್ನೇ ಕೇಳುವುದಿಲ್ಲ ಎಂದು ಅವಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.
ರಾಜ್ಯದಲ್ಲಿ 5 ಸಾವಿರ ತಾಂಡಾ ಇದ್ದು, ವಿಜಯಪುರದಲ್ಲಿ 518 ತಾಂಡಾ 2.40 ಲಕ್ಷ ಮತಗಳಿವೆ. ಸಮಾಜವನ್ನು ಅವಮಾನಿಸಿರುವ ಜಿಗಜಿಣಗಿ ಅವರಿಗೆ ಬಂಜಾರಾ ಸಮಾಜದ ಯಾರೂ ಮತ ಹಾಕಬಾರದು ಎಂದು ನಿರ್ಣಯಿಸಿದ್ದೇವೆ ಎಂದರು.
Laxmi News 24×7