ರಾಯಬಾಗ: ಬೆಂಗಳೂರಿನ ರಾಷ್ಟ್ರೀಕೃತ ಬ್ಯಾಂಕ್ವೊಂದರಲ್ಲಿ ಶಾಖಾಧಿಕಾರಿಯಾಗಿ ಮಾಡುತ್ತಿದ್ದ ಕೆಲಸ ತೊರೆದ ಇಲ್ಲಿನ ಎಂಬಿಎ ಪದವೀಧರ ಆಶೀಷ್ ದೇಶಪಾಂಡೆ, ಈಗ ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ತಂದೆ ಕಲ್ಯಾಣರಾವ್ ಹಾಗೂ ಸಹೋದರ ಅನ್ಶುಮನ್ ಸಹಕಾರದಿಂದ ಒಕ್ಕಲುತನ ಮಾಡುತ್ತ ಉತ್ತಮ ಆದಾಯ ಗಳಿಸುತ್ತಿದ್ದಾರೆ.
‘ಕೃಷಿಯಲ್ಲಿ ಭವಿಷ್ಯವಿಲ್ಲ’ ಎಂದು ಇಂದು ಅನೇಕ ಯುವಕರು ಕೊರಗುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳ ಹಿಂದೆ ಆಶೀಷ್ ಬ್ಯಾಂಕಿನ ಕೆಲಸಕ್ಕೆ ವಿದಾಯ ಹೇಳಿ ಕೃಷಿ ರಂಗದಲ್ಲೇ ಯಶಸ್ಸು ಕಾಣುತ್ತಿದ್ದಾರೆ.
ಸಾವಯವ ಕೃಷಿ: ಆಶೀಷ್ 27 ಎಕರೆ ಜಮೀನು ಹೊಂದಿದ್ದಾರೆ. ‘ವಿಷಮುಕ್ತ ಆಹಾರ ಉತ್ಪಾದಿಸಬೇಕು’ ಎಂಬ ಕನಸು ಹೊತ್ತಿರುವ ಅವರು, ರಾಸಾಯನಿಕ ಕೃಷಿಯಿಂದ ದೂರ ಸರಿದು ಸಾವಯವ ಪದ್ಧತಿಯಡಿ ಮಾಡುತ್ತಿದ್ದಾರೆ. ಮುಖ್ಯಬೆಳೆಗಳಾಗಿ ಕಬ್ಬು, ಗೋವಿನಜೋಳ, ಬಾಳೆ ಬೆಳೆಯುತ್ತಿರುವ ಅವರು, ಮಾವು, ಪಪ್ಪಾಯಿ, ಲಿಂಬೆ, ಶ್ರೀಗಂಧದ ಮರಗಳನ್ನು ಪೋಷಿಸುತ್ತಿದ್ದಾರೆ.
‘ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳಬಾರದು. ದೀರ್ಘಾವಧಿಯವರೆಗೆ ಮಣ್ಣು ಸುರಕ್ಷಿತವಾಗಿರಬೇಕು ಎಂಬ ಕಾರಣಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸುತ್ತಿಲ್ಲ. ಇದರ ಬದಲಿಗೆ, ಎಮ್ಮೆ, ಹಸುವಿನ ಗಂಜಲು, ಸಗಣಿಯನ್ನೇ ಗೊಬ್ಬರವಾಗಿ ಬಳಸುತ್ತಿದ್ದೇನೆ. ಖರ್ಚು-ವೆಚ್ಚವನ್ನೆಲ್ಲ ತೆಗೆದು, ವಾರ್ಷಿಕ ₹25 ಲಕ್ಷಕ್ಕೂ ಅಧಿಕ ಆದಾಯ ಕೈಗೆಟುಕುತ್ತಿದೆ’ ಎಂದು ಆಶೀಷ್ ಹೇಳಿದರು.