ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನ ಓಕೆ: ಆಗದಿರಲಿ ಭಾರತದ ಸಮಗ್ರತೆಗೆ ಧಕ್ಕೆ
Laxminews 24x7
ಫೆಬ್ರವರಿ 7, 2024
Uncategorized
21 Views
ಸ್ವಲ್ಪ ನೆನಪು ಮಾಡಿಕೊಳ್ಳಿ. 2018 ವಿಧಾನಸಭೆ ಚುನಾವಣೆಗೆ 10 ತಿಂಗಳು ಸಮಯ ಇದೆ ಎನ್ನುವಾಗ ನಡೆದ ಆ ಚರ್ಚೆ. ಆಗ ಚರ್ಚೆಗೆ ರಾಜ್ಯದಲ್ಲಿ ದೊಡ್ಡ ರಾಜಕೀಯ ವಿಷಯ ಇರಲಿಲ್ಲ. ಆಡಳಿತರೂಢ ಕಾಂಗ್ರೆಸ್ ವಿರೋಧಿ ಅಲೆ ಹುಟ್ಟುವ ಲಕ್ಷಣ ಇತ್ತು. ಆಗ ಮುಖ್ಯಮಂತ್ರಿ ಆಗಿದ್ದ, ಕರ್ನಾಟಕದ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಮ್ಮಿಂದೊಮ್ಮೆಲೆ ಹಿಂದಿ-ವಿರೋಧಿ ಚಳವಳಿಯ ತಿದಿ ಒತ್ತಿದರು.
ಒಮ್ಮೆಲೆ ಎಲ್ಲೆಲ್ಲೂ ಚರ್ಚೆ ಮೊಳಗಿತು. ಕನ್ನಡದ ಅಸ್ಮಿತೆ ಉಳಿಸಿ ಎಂಬ ಉದ್ಘೋಷ ಎಲ್ಲೆಲ್ಲೂ ಹರಡಿತು. ಬೆಂಗಳೂರಿನಲ್ಲಿ ಕೆಲವರು ರಸ್ತೆಗೆ ಇಳಿದರು, ಮೆಟ್ರೋ ಸ್ಟೇಶನ್ಗೆ ಮುತ್ತಿಗೆ ಹಾಕಿ, ಹಿಂದಿಯಲ್ಲಿದ್ದ ಬೋರ್ಡ್ಗಳಿಗೆ ಕಪ್ಪು ಮಸಿ ಬಳಿದರು. ನಾವೆಲ್ಲ ಖುಷಿ ಪಟ್ಟೆವು. ಪ್ರಧಾನಿ ನರೇಂದ್ರ ಮೋದಿಯನ್ನು ಸಿದ್ಧರಾಮಯ್ಯ ಹಿಗ್ಗಾಮುಗ್ಗಾ ಬಯ್ದರು. ಆಗ ಎಲ್ಲ ಅಂದು ಕೊಂಡಿದ್ದು-ಮೋದಿ ಎದುರಿಸಲು ಎದೆಗಾರಿಕೆ ಇರುವ ಏಕೈಕ ನಾಯಕ ಸಿದ್ಧರಾಮಯ್ಯ ಎಂದು. ಬಿಜೆಪಿ ಹಿಂದಿ ಪರ, ಕಾಂಗ್ರೆಸ್ ಹಿಂದಿ ಹೇರಿಕೆ ವಿರುದ್ಧ ಎಂದು ರಾಷ್ಟ್ರೀಯ ಟಿವಿ ಚಾನೆಲ್ಗಳಲ್ಲಿ ಕೂಡ ಬಿಂಬಿತವಾಯ್ತು. ಅದು 2019 ರ ಚುನಾವಣೆವರೆಗೆ ಮುಂದುವರಿಯಿತು.
ಈಗ ನೇರವಾಗಿ 2024 ಫೆಬ್ರವರಿಗೆ ಬರೋಣ. ನಮ್ಮ ತೆರಿಗೆ ನಮ್ಮ ಹಕ್ಕು (Our Tax our Rights ) ಎಂಬ ಉದ್ಘೋಷದೊಂದಿಗೆ ಮತ್ತೆ ಸಿದ್ದರಾಮಯ್ಯ (Siddaramaiah) ತಯಾರಾಗಿ ನಿಂತಿದ್ದಾರೆ. ಈ ಬಾರಿ ಈ ವಿಚಾರ ಬರೀ ಹೇಳಿಕೆಯಲ್ಲಿ ಮುಗಿಯುತ್ತಿಲ್ಲ. ಇದೇ ವಿಷಯ ಇಟ್ಟುಕೊಂಡು ಅವರು ಮತ್ತು ಅವರ ಮಂತ್ರಿಮಂಡಲದ ಸದಸ್ಯರು ದೆಹಲಿಯ ಜಂತರ್ ಮಂತರ್ನಲ್ಲಿ ‘ಗಾಂಧಿಗಿರಿ’ ನಡೆಸಲಿದ್ದಾರೆ.
ಗಾಂಧೀಜಿಯೊಂದಿಗೆ ಸಿದ್ದು ಮತ್ತು ಇತರೇ ಮಂತ್ರಿಗಳು ದೆಹಲಿಯತ್ತ ಹೊರಟ ಜಾಹೀರಾತು ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಹೋರಾಟಕ್ಕೆ ಗಾಂಧೀಜಿಯನ್ನು ಕರೆ ತಂದಿದ್ದಾಯ್ತು. ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಅವರು, ವಿರೋಧ ಪಕ್ಷಗಳ ನಾಯಕರುಗಳಿಗೆ ಪತ್ರ ಬರೆದು ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ ಎಂಬ ಆಹ್ವಾನ ಕೂಡ ನೀಡಿದ್ದಾರೆ.