ಚಿಕ್ಕೋಡಿ: ವಿಧಾನಸಭೆ ಸದನದಲ್ಲಿ ಕಬ್ಬು ಬೆಳೆಗಾರರ ಕುರಿತು ಒಳ್ಳೆಯ ಚರ್ಚೆಗಳು ನಡೆಯುತ್ತಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ರೈತರ ಪರ ಕಾಳಜಿ ಇದ್ದರೆ ತಕ್ಷಣ ಸರ್ಕಾರ ನುಡಿದಂತೆ ನಡೆದು ಕಬ್ಬು ತೂಕದಲ್ಲಿ ಆಗುತ್ತಿರುವ ಮೋಸವನ್ನು ತಡೆಯಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬು ತೂಕದಲ್ಲಿ ಮೋಸ ಮಾಡುತ್ತಿವೆ. ರೈತರಿಂದಲೂ ಇಂತಹ ಆರೋಪ ಕೇಳಿ ಬರುತ್ತದೆ. ಆದರೆ ಈ ಮೋಸ ತಡೆಯಬೇಕಾದ ಸರ್ಕಾರಗಳು ರೈತರ ಪರ ನಿಲ್ಲದೇ ಬರಿ ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
2001ರಿಂದ ನಾನು ಕೆಲವು ಸಕ್ಕರೆ ಕಾರ್ಖಾನೆಗಳು ಯಾವ ರೀತಿ ತೂಕದಲ್ಲಿ ಮೋಸ ಮಾಡುತ್ತಾರೆ ಎನ್ನುವುದನ್ನು ಸರ್ಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಈಗಲಾದರೂ ಸಕ್ಕರೆ ಸಚಿವರು ರೈತರ ಪರವಾಗಿ ಕೆಲಸ ಮಾಡಲಿ ಎಂದು ಮನವಿ ಮಾಡಿದರು.
ಡಿಜಿಟಲ್ ತೂಕದ ಯಂತ್ರ: ಹಿಂದೆ ನಡೆದ ಸದನದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಯಂತ್ರವನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದರು. ಕಳೆದ ಏಳು ತಿಂಗಳಿನಿಂದ ಯಾವುದೇ ಒಂದು ತೂಕದ ಮಷಿನ್ ಅನ್ನು ಸರ್ಕಾರದ ವತಿಯಿಂದ ಕಾರ್ಖಾನೆಗಳ ಆವರಣದಲ್ಲಿ ಅಳವಡಿಕೆ ಮಾಡಿಲ್ಲ. ಹೀಗಾಗಿ ಕಬ್ಬು ಬೆಳೆಗಾರರ ಪರ ಸರ್ಕಾರ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.
ರೈತರ ದಾರಿ ತಪ್ಪಿಸಬೇಡಿ: ನಾನು ಒಬ್ಬ ಸಕ್ಕರೆ ಕಾರ್ಖಾನೆಯ ಮಾಲೀಕನಾಗಿ ಸರ್ಕಾರಕ್ಕೆ ಹೇಳುತ್ತೇನೆ. ಸರ್ಕಾರದ ವತಿಯಿಂದ ಏನಾದರೂ ನೀವು ತೂಕ ಮಾಪನ ಯಂತ್ರವನ್ನು ಅಳವಡಿಸುವವರಿದ್ದರೆ ಮೊದಲಿಗೆ ನನ್ನ ಕಾರ್ಖಾನೆ ಆವರಣದಲ್ಲಿ ಅಳವಡಿಸಲಿ. ಬಾಯಿ ಮಾತಿಗೆ ಏನಾದರೂ ಹೇಳಿ ರೈತರ ದಾರಿ ತಪ್ಪಿಸಬೇಡಿ. ಕಬ್ಬಿನ ತೂಕದಲ್ಲಿ ಮೋಸ ಮಾಡೋದು ಒಂದು ದೊಡ್ಡ ಜಾಲವಿದೆ. ಸರ್ಕಾರ ದಿಟ್ಟ ಕ್ರಮ ಕೈಗೊಂಡರೆ ನಮ್ಮಿಂದ ಪ್ರಾರಂಭವಾಗಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.