ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಸುಟ್ಟಿದ್ದು ತಪ್ಪು, ರಾಜ್ಯದ ಹಿತ ಕಾಯಲು ಬದ್ಧ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್ ಕರಾಳ ದಿನ ಆಚರಣೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದರು. ಅವರ ನಿರ್ಧಾರ ತಪ್ಪು. ನಾವು ನಮ್ಮ ರಾಜ್ಯದ ಹಿತ ಕಾಯಲು, ಕನ್ನಡಿಗರ ರಕ್ಷಣೆಗೆ ಬದ್ಧ. ಕರ್ನಾಟಕದಲ್ಲಿರುವ ಜನರು, ಅಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರದಲ್ಲಿ ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ನಿನ್ನೆ ಮುಖ್ಯಮಂತ್ರಿಗಳು ಕೂಡ ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ಬರ ಪರಿಸ್ಥಿತಿ ಅಧ್ಯಯನ ಮಾಡಿ ಪರಿಹಾರ ಕೊಡಿಸಲಿ: ಬಿಜೆಪಿ ನಾಯಕರು ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿದರೆ ತಪ್ಪೇನೂ ಇಲ್ಲ. ಕೇಂದ್ರ ಬರ ಅಧ್ಯಯನ ತಂಡ ಇಲ್ಲಿ ಪರಿಸ್ಥಿತಿ ಅಧ್ಯಯನ ಮಾಡಿದೆ, ಆದರೂ ಯಾವುದೇ ನೆರವು ಬಂದಿಲ್ಲ. ಈಗ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಿ ಕೇಂದ್ರದಿಂದ ಪರಿಹಾರ ಕೊಡಿಸಲಿ. ಕರ್ನಾಟಕ ಸರ್ಕಾರ, ಕೇಂದ್ರದ ಬರ ಪರಿಸ್ಥಿತಿ ನಿಯಮಗಳ ಅನುಸಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ಉಪಕಾರ ಮನಸ್ಥಿತಿ ಪ್ರದರ್ಶಿಸಲಿ. ಕಂದಾಯ ಸಚಿವರು ಹಾಗೂ ಕೃಷಿ ಸಚಿವರು ಕೇಂದ್ರಕ್ಕೆ ಸಲ್ಲಿಸಿರುವ ಮನವಿಗೆ ತಕ್ಕಂತೆ ಪರಿಹಾರ ನೀಡಲಿ ಎಂದು ಡಿಕೆಶಿ ಒತ್ತಾಯಿಸಿದ್ದಾರೆ.
ಕೇಂದ್ರದ ಬರ ಅದ್ಯಯನ ತಂಡ ಅಧ್ಯಯನ ಮಾಡಿದರೂ ಯಾವುದೇ ಸ್ಪಂದನೆ ಬಂದಿಲ್ಲವಲ್ಲ ಎಂದು ಕೇಳಿದಾಗ, ಆ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಕೂಡ ರಾಜ್ಯ ಪ್ರವಾಸ ಮಾಡಿ ಬರ ಅಧ್ಯಯನ ಮಾಡಲಿ. ನಂತರ ಅವರು ಕೇಂದ್ರ ಸರ್ಕಾರಕ್ಕೆ ತಮ್ಮ ವರದಿ ನೀಡಿ, ರಾಜ್ಯಕ್ಕೆ ಸೂಕ್ತ ಪರಿಹಾರ ಮೊತ್ತ ಕೊಡಿಸಲಿ ಎಂದರು.
ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ತಾತ್ಕಾಲಿಕ ಸ್ಥಗಿತ: ಮತ್ತೊಂದೆಡೆ, ಮರಾಠ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್ಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಬೆಂಗಳೂರಿನಿಂದ ಹೊರಡಬೇಕಿದ್ದ ಶಿರಡಿ, ಮುಂಬೈ, ಪುಣೆ ಬಸ್ಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ಗಮನಿಸಬೇಕು ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿದೆ. ಮಹಾರಾಷ್ಟ್ರದ ಭಾಗಗಳಿಗೆ ತೆರಳಲು ಮುಂಗಡ ಆಸನ ಕಾಯ್ದಿರಿಸಿರುವ ಪ್ರಯಾಣಿಕರು, ಬಸ್ ನಿಲ್ದಾಣಕ್ಕೆ ಬಾರದೆ, ಹೆಚ್ಚಿನ ಮಾಹಿತಿಗೆ ಕೆಎಸ್ಆರ್ಟಿಸಿ ಸಹಾಯವಾಣಿಯನ್ನು ಸಂಪರ್ಕ ಮಾಡುವಂತೆ ಮನವಿ ಮಾಡಿದೆ.