ವಿಜಯಪುರ: ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕೇಳಿ ಬಂದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ (ಗುರುವಾರ) ಭೇಟಿ ನೀಡಿದ ಅರಣ್ಯಾಧಿಕಾರಿಗಳು, ಕೆಲಹೊತ್ತು ಶೋಧ ನಡೆಸಿದ್ದಾರೆ. ಜಿಲ್ಲಾ ಉಪ ಅರಣ್ಯಾಧಿಕಾರಿ ಶಿವಶರಣಯ್ಯ, ಸಹಾಯಕ ಅರಣ್ಯಾಧಿಕಾರಿ ಭಾಗ್ಯವಂತ ಮಸೂದೆ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಹಾಗೂ ಸಿಬ್ಬಂದಿ ಪರಿಶೀಲಿಸಿದರು. ವಿಜುಗೌಡ, ಪುತ್ರ ಶಾಶ್ವತಗೌಡ ಹಾಜರಿದ್ದು ಅಧಿಕಾರಿಗಳಿಗೆ ಸಹಕರಿಸಿದರು.
ವಿಜುಗೌಡ ಪಾಟೀಲ ಹೇಳಿದ್ದೇನು?: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಜುಗೌಡ ಪಾಟೀಲ, ”ಹುಲಿ ಉಗುರಿನ ಮಾದರಿಯ ಪೆಂಡೆಂಟ್ ನಕಲಿ ಎಂದು ನಿನ್ನೆಯೇ ಹೇಳಿದ್ದೆ. ಇಂದೂ ಸಹ ಅದನ್ನೇ ಹೇಳುತ್ತೇನೆ. ಹಾಗಿದ್ದೂ ಸಹ ತಮ್ಮ ಬಳಿ ಇರುವ ಈ ವಸ್ತುವನ್ನು ಖುದ್ದು ನಾನೇ ಅಧಿಕಾರಿಗಳಿಗೆ ನೀಡುವುದಾಗಿ ಹೇಳಿದ್ದೆ. ಆದರೆ, ಅಧಿಕಾರಿಗಳು ತಾವೇ ಇಂದು ಪರಿಶೀಲಿಸುವುದಾಗಿ ಹೇಳಿದ್ದರು. ಅದರಂತೆ ಪರಿಶೀಲಿಸಿದ್ದಾರೆ. ಅವರಿಗೆ ಸಹಕಾರ ಕೂಡ ನೀಡಿದ್ದೇವೆ. ಆ ವಸ್ತುವನ್ನು ಈಗಾಗಲೇ ಹಸ್ತಾಂತರಿಸಿದ್ದು ಅಧಿಕಾರಿಗಳು ಪರಿಶೀಲಿಸಿ ಖಚಿತಡಿಸಲಿ” ಎಂದರು.
ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ ಫೋಟೋ
ಮುಂದುವರೆದು ಮಾತನಾಡಿ, ”ವಾಸ್ತು ಪ್ರಕಾರವಾಗಿ 10-11 ವರ್ಷದ ಹಿಂದೆ ಆ ವಸ್ತುವನ್ನು ಸಣ್ಣ ಮೊತ್ತಕ್ಕೆ ಖರೀದಿಸಿದ್ದೆ. ಒಂದು ದಿನ ನನ್ನ ಮಗ ಶಾಶ್ವತಗೌಡ ಪಾಟೀಲ್ ಅದನ್ನು ಧರಿಸಿದ್ದ. ನಕಲಿ ಅಂತ ಗೊತ್ತಾದ ಬಳಿಕ ಆ ಸರವನ್ನು ತೆಗೆದಿಡಲಾಗಿದೆ. ಇದೀಗ ಹುಲಿ ಉಗುರಿನ ಮಾದರಿ ಪೆಂಡೆಂಟ್ ಧರಿಸಿದ ತಮ್ಮ ಮಗನ ಫೋಟೋ ಫೇಸ್ಬುಕ್ ಮತ್ತು ಸುದ್ದಿ ಮಾಧ್ಯಮಗಳಲ್ಲಿ ವೈರಲ್ ಆಗಿದೆ” ಎಂದು ಹೇಳಿದರು.