Breaking News

ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರನ ಹತ್ಯೆ: ದುಷ್ಕರ್ಮಿಗಳ ಗುಂಡೇಟಿಗೆ ಸುಖ್ದೂಲ್ ಸಿಂಗ್ ಬಲಿ

Spread the love

ನವದೆಹಲಿ : ಖಲಿಸ್ತಾನಿ ಉಗ್ರ ಹರ್​ದೀಪ್​ ಸಿಂಗ್​ ನಿಜ್ಜರ್​ ಸಾವಿನ ಕಾರಣ ಕೆನಡಾ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧ ಹಳಸಿದ ಬೆನ್ನಲ್ಲೇ ಇನ್ನೊಬ್ಬ ಖಲಿಸ್ತಾನ ಉಗ್ರ ಮತ್ತು ಮೋಸ್ಟ್ ವಾಂಟೆಡ್​ ಗ್ಯಾಂಗ್​ಸ್ಟರ್​ ಸುಖ್ದೂಲ್ ಸಿಂಗ್ ಅಲಿಯಾಸ್ ಸುಖ ಡುನೆಕೆ ಎಂಬಾತನ ಹತ್ಯೆ ನಡೆದಿದೆ.

ಈಚೆಗೆ ನಡೆದ ಗುಂಡಿನ ದಾಳಿಯಲ್ಲಿ ಈತ ಮೃತಪಟ್ಟಿದ್ದಾನೆ ಎಂದು ತನಿಖಾ ಸಂಸ್ಥೆಗಳು ದೃಢಪಡಿಸಿವೆ.

ಕೆನಡಾದ ವಿನ್ನಿಪೆಗ್‌ನಲ್ಲಿ ಸೆಪ್ಟೆಂಬರ್ 18 ರಂದು ನಡೆದ ಗುಂಡಿನ ಚಕಮಕಿಯಲ್ಲಿ ಸುಖ್ದೂಲ್ ಸಿಂಗ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಕೊಂದಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್​) ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಮೂರು ದಿನಗಳ ಹಿಂದೆ ಸಂಜೆ 6:20 ರ ಸುಮಾರಿನಲ್ಲಿ ಆಲ್ಡ್‌ಗೇಟ್ ರಸ್ತೆ ಮತ್ತು ಗೋಬರ್ಟ್ ಕ್ರೆಸೆಂಟ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಗ್ಯಾಂಗ್​ಸ್ಟರ್​ ಸಾವಿಗೀಡಾಗಿದ್ದಾನೆ. ಅಪರಾಧಗಳ ನಿಗ್ರಹ ಘಟಕ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಸಾವು ದೃಢಪಡಿಸಿದ ಭಾರತ: ಇದರ ಜೊತೆಗೆ ಭಾರತೀಯ ಗುಪ್ತಚರ ಸಂಸ್ಥೆಗಳೂ ಸುಖ್ದೂಲ್ ಸಿಂಗ್ ಸಾವನ್ನು ದೃಢಪಡಿಸಿವೆ. ಸುಖ್ದೂಲ್​ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಎರಡು ಗ್ಯಾಂಗ್​ಗಳ ನಡುವಿನ ವೈಷಮ್ಯದಿಂದಾಗಿ ಆತನ ಕೊಲೆ ನಡೆದಿದೆ. ಆದರೆ, ಇದುವರೆಗೂ ಹತ್ಯೆಯ ಹೊಣೆಯನ್ನು ಯಾವುದೇ ತಂಡ ಹೊತ್ತುಕೊಂಡಿಲ್ಲ ಎಂದು ಹೇಳಿವೆ.

ಸುಖ ಡುನೆಕೆ ಎಂದೇ ಹೆಸರಾಗಿದ್ದ ಗ್ಯಾಂಗ್​ಸ್ಟರ್​ ದಾವೀಂದರ್ ಬಾಂಬಿಹಾ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ. ಸ್ಥಳೀಯ ಪೊಲೀಸರ ನೆರವಿನಿಂದ 2017ರಲ್ಲಿ ಪಂಜಾಬ್​​ನಿಂದ ಪರಾರಿಯಾಗಿದ್ದ. ನಕಲಿ ದಾಖಲೆಗಳು, ಪಾಸ್ಟ್​ಪೋರ್ಟ್​, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಸೃಷ್ಟಿಸಿ ಕೆನಡಾಗೆ ಪಲಾಯನ ಮಾಡಿದ್ದ. ಈತನ ವಿರುದ್ಧ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಖಲಿಸ್ತಾನ್​ ಪರ ಕೆಲಸ: ಡುನೆಕೆ ಖಲಿಸ್ತಾನ್ ಪರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ. ಕೆನಡಾ ಮೂಲದ ಖಲಿಸ್ತಾನ್ ಉಗ್ರ ಅರ್ಷ್‌ದೀಪ್ ಸಿಂಗ್ ಅಕಾ ಅರ್ಶ್ ದಲಾನ ಜೊತೆಗೆ ನಂಟು ಹೊಂದಿದ್ದು, ಭಾರತದಲ್ಲಿ ಗುರುತಿಸಿದ ಭಯೋತ್ಪಾದಕರೊಂದಿಗೆ ಸೇರಿಕೊಂಡು ನಾನಾ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪವಿದೆ. ಈತನ ವಿರುದ್ಧ ಸುಲಿಗೆ, ಸುಪಾರಿ ಕೊಲೆ, ಇತರ ಘೋರ ಅಪರಾಧಗಳು ಸೇರಿದಂತೆ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ