ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಈಗ ಕಾವೇರಿ, ಕನ್ನಡಿಗರ ಬಗ್ಗೆ ಚಿಂತೆ ಇಲ್ಲ. ಅವರಿಗೆ ಘರ್ ವಾಪ್ಸಿಯದ್ದೇ ಚಿಂತೆಯಾಗಿದೆ.
ವರ್ಗಾವಣೆ ದಂಧೆ ಹಾಗೂ ಕಮಿಷನ್ ವ್ಯವಹಾರ ಮರೆಮಾಚಲು ಘರ್ ವಾಪ್ಸಿ ನಾಟಕವಾಡುತ್ತಿದ್ದಾರೆ. ಈ ಚಿಂತೆಯಲ್ಲಿರುವ ಅವರು ನಮ್ಮನ್ನು ಸರ್ವಪಕ್ಷ ಸಭೆಗೆ ಕರೆಯುತ್ತಾರೋ ಇಲ್ವೋ ಗೊತ್ತಿಲ್ಲ. ಅವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ಜರಗನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆ, ಕಮಿಷನ್ ವ್ಯವಹಾರ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಹಾದಿ ಬೀದಿಯಲ್ಲಿ ಜನರು ಛೀ.. ಥೂ.. ಎನ್ನುತ್ತಿದ್ದಾರೆ. ಮರೆ ಮಾಚಲು ಘರ್ ವಾಪ್ಸಿ ನಾಟಕ ಆಡುತ್ತಿದೆ ಎಂದು ದೂರಿದರು. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಅರ್ಧಕ್ಕರ್ಧ ಮುಗಿದು ಹೋಗುತ್ತದೆ. ಜೆಡಿಎಸ್ ಮುಗಿದೇ ಹೋಗುತ್ತದೆ ಅಂತಿದ್ದಾರೆ. ನಿನ್ನೆ ಮೊನ್ನೆ ಆಯ್ಕೆ ಆದವರು ಕೂಡ 10-20ಕ್ಕೂ ಹೆಚ್ಚು ಎಂಎಲ್ಎಗಳು ಬರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ, ಆ ಪಕ್ಷದಲ್ಲಿ ಇರುವ ಶಾಸಕರ ತಳಮಳದ ಬಗ್ಗೆ ಅವರು ಮಾತನಾಡುತ್ತಿಲ್ಲ, ಯಾಕೆ ಎಂದು ಪ್ರಶ್ನಿಸಿದರು.
ಇವರಿಗೆ ಗೊತ್ತಿರಲಿ, ಯಾವುದೇ ಪಕ್ಷವನ್ನು ನಿರ್ನಾಮ ಮಾಡೋದು ಯಾರಿಂದಲೂ ಸಾಧ್ಯವಿಲ್ಲ. ಹಿಂದೆ ಎಸ್.ಎಂ. ಕೃಷ್ಣ ಅವರ ಬಹುಮತದ ಸರ್ಕಾರ ಇತ್ತು. ಆಗಲೂ ಬಿಜೆಪಿ, ಜೆಡಿಎಸ್ನಿಂದ ಹಲವಾರು ಶಾಸಕರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡರು. ಆಮೇಲೆ 2004ರಲ್ಲಿ ಏನಾಯ್ತು?, 2008ರಲ್ಲಿ ಬಿಜೆಪಿಯವರು ಕೂಡ ಹಾಗೆಯೇ ಮಾಡಿದರು. 2013ಕ್ಕೆ ಏನಾಯಿತು? 2013ರಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಮ್ಮ ಶಾಸಕರಿಂದ ಕ್ರಾಸ್ ವೋಟಿಂಗ್ ಮಾಡಿ ಕರೆದುಕೊಂಡು ಹೋಯಿತು. 2018ರಲ್ಲಿ ಎಲ್ಲಿಗೆ ಬಂದು ನಿಂತಿತು?, ಇನ್ನು ಬಿಜೆಪಿಯವರು 17 ಶಾಸಕರನ್ನು ಕರೆದುಕೊಂಡು ಹೋಗಿ 3 ವರ್ಷ ಸರ್ಕಾರವನ್ನೂ ಮಾಡಿ ಈಗೆಲ್ಲಿ ಬಂದು ನಿಂತಿದ್ದಾರೆ. ಮುಂದೆ ಇವರ ಹಣೆಬರಹವೂ ಇಷ್ಟೇ. ಈ ಘರ್ ವಾಪ್ಸಿಗಳೆಲ್ಲ ಕೆಲಸ ಮಾಡಲ್ಲ ಎಂದು ಹೇಳಿದರು.