ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್ಗಳ ದುರಸ್ತಿ, ನವೀಕರಣ ಹಾಗೂ ಗುಣಮಟ್ಟ ಉತ್ತಮಪಡಿಸಲು ಒಟ್ಟು 21 ಕೋಟಿ ರೂ. ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ ಮೆನು ಬದಲಿಸುವುದು. ಊಟದ ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಆಹಾರ ಗುತ್ತಿಗೆದಾರರಿಗೆ ನೀಡುತ್ತಿರುವ ಒಂದು ದಿನದ ಆಹಾರ (ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ) ಬೆಲೆಯನ್ನು 57 ರೂ.ಗಳಿಂದ 62 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರಿಗೆ ಎಂದಿನಂತೆ ಬೆಳಗಿನ ತಿಂಡಿ 5 ರೂ., ಮಧ್ಯಾಹ್ನದ ಊಟ 10 ರೂ. ಹಾಗೂ ರಾತ್ರಿ ಊಟ 10 ರೂ.ಗಳಿಗೆ ಲಭ್ಯವಾಗಲಿದೆ.
ಕಲಿಕಾ ಬಲವರ್ಧನೆ: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯು 2022-23 ಹಾಗೂ 2023-24ನೇ ಸಾಲಿನ ವಿವಿಧ ಕಾರ್ಯಕ್ರಮಗಳ ಅಡಿ ಲಭ್ಯವಾಗುವ ಪಿ.ಎ.ಬಿ. ಅನುಮೋದಿತ ಅನುದಾನದಲ್ಲಿ 1 ರಿಂದ 9ನೇ ತರಗತಿವರೆಗಿನ ಎಲ್ಲ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕ ಹಾಗೂ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಎಲ್ಲ ಶಿಕ್ಷಕರಿಗೆ ಚಟುವಟಿಕೆ ಬ್ಯಾಂಕ್ ವಿನ್ಯಾಸಗೊಳಿಸಿ ಮುದ್ರಿತ ಸರಬರಾಜು ಕೈಗೊಳ್ಳಲು 78.13 ಕೋಟಿ ರೂ. ಮೊತ್ತದ ಅನುದಾನವನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಲಿಕಾ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಸಂಪುಟದ ಪ್ರಮುಖ ತೀರ್ಮಾನ ಏನು?
- ಲೋಕಾಯುಕ್ತ ದಾಳಿಗೊಳಗಾಗಿ ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಾಪಣ್ಣ ವಿರುದ್ಧದ ಆರೋಪ ಸಾಬೀತು ಸರಕಾರಿ ಸೇವೆಯಿಂದ ವಜಾಗೊಳಿಸಲು ನಿರ್ಧಾರ.
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಗೊಬ್ಬರಗುಂಟೆ ಗ್ರಾಮದ ಸ.ನಂ.64ರಲ್ಲಿನ 5 ಎಕರೆ ಸರಕಾರಿ ಜಮೀನನ್ನು ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ ಉದ್ದೇಶಿತ ಜಮೀನಿಗೆ ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಹಿನ್ನೆಲೆ, ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.