ತುಮಕೂರು : ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಯಲ್ಲಿ (ಕೃಷಿ ಹೊಂಡದಂತಿರುವ ಕೆರೆ) ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಫಜಲಪುರದ ಮಹದೇವಪ್ಪ (44) ಚಿಕ್ಕಮಗಳೂರಿನ ಶಂಕರ್ (11), ರಾಮನಗರದ ಹರ್ಷಿತ್ (11) ಮೃತರು ಎಂದು ತಿಳಿದುಬಂದಿದೆ.
ರಂಜಿತ್, ಶಂಕರ್, ಹರ್ಷಿತ್ ಮಠದಲ್ಲಿ 6ನೇ ತರಗತಿಯನ್ನು ಓದುತ್ತಿದ್ದರು. ರಂಜಿತ್ನ ತಾಯಿ ಲಕ್ಷ್ಮೀ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ಈ ವೇಳೆ ಅವರು ಊಟಕ್ಕೆ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತೆರಳಿದ್ದರು. ರಂಜಿತ್ ಗೋ ಕಟ್ಟೆಗೆ ಈಜಲು ತೆರಳಿದ್ದಾನೆ. ಆದರೆ, ಈಜು ಸಾಧ್ಯವಾಗದೆ ಮುಳುಗಿದ್ದಾನೆ. ನೋಡಿದ ತಾಯಿ ನೀರಿಗೆ ಹಾರಿ ಮಗನನ್ನು ರಕ್ಷಿಸಲು ಹೋಗಿ ಆಕೆಯೂ ಸಾವನ್ನಪ್ಪಿದ್ದಾರೆ.
ಇದೇ ವೇಳೆ ಇಬ್ಬರನ್ನು ಕಾಪಾಡಲು ಅಲ್ಲಿಯೇ ಇದ್ದ ಆತನ ಇಬ್ಬರು ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್ ಗೋ ಕಟ್ಟೆಗೆ ತೆರಳಿದ್ದಾರೆ. ಘಟನೆಯಲ್ಲಿ ಅವರೂ ಮೃತಪಟ್ಟರು. ಮಹಾದೇವ ಎಂಬವರು ನೀರಿಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದ್ದು, ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.