ಬೆಂಗಳೂರು: ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮುನೇಶ್ವರ ನಗರದ ನಿವಾಸಿ ಶ್ರೀದೇವಿ ತೀವ್ರ ಹಲ್ಲೆಗೊಳಗಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀರ್, ಈತನ ಪುತ್ರ ಸದ್ದಾಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುನೇಶ್ವರ ನಗರದಲ್ಲಿ ಕಳೆದ 16 ವರ್ಷಗಳಿಂದ ಶ್ರೀದೇವಿ ವಾಸವಾಗಿದ್ದಳು. ಈಕೆ ಉಳಿದುಕೊಂಡಿದ್ದ ಕಟ್ಟಡದಲ್ಲಿ ನಜೀರ್ ವಾಸವಾಗಿದ್ದ. 15 ಕ್ಕಿಂತ ಹೆಚ್ಚು ಮನೆಗಳಿರುವ ಕಟ್ಟಡಕ್ಕೆ ಫಯಾಜ್ ಎಂಬಾತ ಮಾಲೀಕನಾಗಿದ್ದಾನೆ. ಆದರೆ ವಿದೇಶದಲ್ಲಿರುವ ಕಾರಣ ಶ್ರೀದೇವಿಗೆ ಬಾಡಿಗೆ ಸಂಗ್ರಹಿಸಿ ತನಗೆ ನೀಡುವಂತೆ ಸೂಚಿಸಿದ್ದ. ಇದರಂತೆ ಪ್ರತಿ ತಿಂಗಳ ಮನೆ ಬಾಡಿಗೆ ಹಣ ಸಂಗ್ರಹಿಸಿ ಮನೆ ಮಾಲೀಕರಿಗೆ ಶ್ರೀದೇವಿ ನೀಡುತ್ತಿದ್ದಳು.
ಇದೇ ತಿಂಗಳು ಬಾಡಿಗೆ ಹಣ ಕೇಳಲು ನಜೀರ್ ಮನೆಗೆ ಶ್ರೀದೇವಿ ಹೋಗಿದ್ದಳು. ಹಣ ಕೇಳಿದ್ದಕ್ಕೆ ಮಹಿಳೆಗೆ ಅಶ್ಲೀಲವಾಗಿ ಬೈದಿದ್ದಾನೆ. ಮೂರು ತಿಂಗಳಿಂದ ಕೊಡದಿರುವ ಮೂರು ತಿಂಗಳ ಬಾಡಿಗೆ ಹಣ ಕೊಡಬೇಕು ಎಂದು ಜೋರು ಧ್ವನಿಯಲ್ಲಿ ಕೇಳಿದ್ದಾಳೆ. ಇದರಿಂದ ಅಕ್ರೋಶಗೊಂಡ ನಜೀರ್, ಮಗ ಸದ್ದಾಂ ಸಹ ಬೈದಿದ್ದು ಅಲ್ಲದೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಆಕೆಯ ಮುಖ ಕೈಗಳಿಗೆ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಶ್ರೀದೇವಿ ಕುಸಿದುಬಿದ್ದಿರುವುದನ್ನು ಕಂಡು ಸ್ಥಳದಿಂದ ಅಪ್ಪ-ಮಗ ಎಸ್ಕೇಪ್ ಆಗಿದ್ದರು. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶ್ರೀದೇವಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಜಾಮೀನು ಪಡೆದು ಆರೋಪಿಗಳು ಹೊರಬಂದಿದ್ದಾರೆ.