ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರು ಸಂಕೇಶ್ವರ ಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ದರಣಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಣಕೇರಿ ಗ್ರಾಮಸ್ಥೆ ಕಿರಣ ಮಹಾದೇವ ಟಿಕ್ಕೆ ಅವರನ್ನು ಹುಕ್ಕೇರಿ ತಾಲೂಕಿನ ನಿಡಸೋಸಿ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಳೆದ ಹನ್ನೆರಡು ದಿನಗಳ ಹಿಂದೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ನಂತರ ಶಸ್ತ್ರ ಚಿಕಿತ್ಸೆ ಮಾಡುವ ಮುಖಾಂತರ ಹೆರಿಗೆಯನ್ನು ಮಾಡಿಸಲಾಗಿತ್ತು, ಮೃತ ಕಿರಣಿ ಗಂಡು ಮಗುವಿಗೆ ಜನ್ಮ ಕೂಡಾ ನೀಡಿದ್ದರು.
ಆಗಸ್ಟ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕಿರಣಿ ಮಹಾದೇವ ಟಿಕ್ಕೆ, ತವರು ಮನೆ ಮಹಾರಾಷ್ಟ್ರದ ಗಿಜೋಣಿಗೆ ಹೋಗಿದ್ದರು. ಆಗಸ್ಟ್ 4ರಂದು ಆರೋಗ್ಯದಲ್ಲಿ ಏರುಪೇರಾದ ಕಾರಣ ಕುಟುಂಬಸ್ಥರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಿಸದೇ ಕಿರಣಿ ಟಿಕ್ಕೆ ಮೃತಪಟ್ಟಿದ್ದಾರೆ.
ಆಂಬ್ಯುಲೆನ್ಸ್ನಲ್ಲಿ ಶವ ಇಟ್ಟು ಪ್ರತಿಭಟನೆ: ಹೆರಿಗೆ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಹೀಗಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದು, ಹೀಗಾಗಿ ನಿಡಸೋಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮೃತ ಬಾಣಂತಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಕೇಶ್ವರ ಪೊಲೀಸ್ ಠಾಣೆ ಎದುರು ಆಂಬ್ಯುಲೆನ್ಸ್ನಲ್ಲಿ ಶವ ಇಟ್ಟು ಶುಕ್ರವಾರ ತಡರಾತ್ರಿ ದರಣಿ ನಡೆಸಿದ್ದಾರೆ. ಹಸುಗೂಸಿನೊಂದಿಗೆ ಬಾಣಂತಿಯ ಶವ ಇಟ್ಟು ಪ್ರತಿಭಟನೆ ನಡೆಸುತ್ತಿದಂತೆ ಸಂಕೇಶ್ವರ ಪೊಲೀಸರು ಕುಟುಂಬಸ್ಥರ ಮನವೊಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಟ್ಟಿದ್ದಾರೆ.