ಬೆಂಗಳೂರು: ಗಂಭೀರ ಸ್ವರೂಪದ ಅಪರಾಧದ ಪ್ರಕರಣಗಳ ಮಾಹಿತಿ ನೀಡಿದಾಗ ತಕ್ಷಣ ಎಫ್ಐಆರ್ ದಾಖಲು ಮಾಡಬೇಕು ಎಂದು ನಿರ್ದೇಶಿಸಿರುವ ಹೈಕೋರ್ಟ್, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಲಲಿತಾಕುಮಾರಿ ಪ್ರಕರಣದ ಸಾರಾಂಶವನ್ನು ಎಲ್ಲ ಪೊಲೀಸ್ ಠಾಣೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಒದಗಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ದೂರು ಸಲ್ಲಿಸಿದ್ದರೂ ಎಫ್ಐಆರ್ ದಾಖಲಿಸದ ಬಬಲೇಶ್ವರ ಪೊಲೀಸ್ ಠಾಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲೆಯ ಕಿಲಾರಹಟ್ಟಿಯ ವಿಠ್ಠಲ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೇ, ಲಲಿತಾಕುಮಾರಿ ವಿರುದ್ಧದ ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಮಾರ್ಗಸೂಚಿಗಳುಳ್ಳ ಸುತ್ತೋಲೆ ಹೊರಡಿಸಲು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಅಲ್ಲದೇ, ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್ಐಆರ್ ದಾಖಲಿಸಲು ವಿಳಂಬ ಮಾಡದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ತಾಕೀತು ಮಾಡಿದೆ. ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ನಡೆಸಬೇಕು ಎಂಬುದು ಅಗತ್ಯವಿಲ್ಲ. ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನಗಳೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್ಐಆರ್ ದಾಖಲಿಸಬೇಕು. ಈ ಸಂಬಂಧ ಪೊಲೀಸ್ ಠಾಣಾ ಡೈರಿಯಲ್ಲಿ ತನಿಖೆಯ ಸಂಪೂರ್ಣ ಮಾಹಿತಿ ಉಲ್ಲೇಖಿಸಬೇಕು ಎಂದು ಪೀಠ ತಿಳಿಸಿದೆ.
ಅಲ್ಲದೇ, ಪ್ರಸ್ತುತದ ಪ್ರಕರಣದಲ್ಲಿ ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸಿದಾಗ ಎಫ್ಐಆರ್ ದಾಖಲಿಸಬಹುದಾಗಿತ್ತು. ಆದರೆ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರುವವರೆಗೂ ದಾಖಲಿಸದಿರುವುದು ಕರ್ತವ್ಯಲೋಪಕ್ಕೆ ಕಾರಣವಾಗಲಿದೆ. ಇದೇ ರೀತಿಯ ಹಲವು ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರುತ್ತಿದ್ದು, ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೇ, ಈ ಸಂಬಂಧದ ಅನುಪಾಲನಾ ವರದಿಯನ್ನು ಆಗಸ್ಟ್ 29ರಂದು ಸಲ್ಲಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.