ಮಂಗಳೂರು (ದಕ್ಷಿಣ ಕನ್ನಡ): ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಶೀರ್ ಬಂಧಿತ ಆರೋಪಿ. ಜುಲೈ 26ರಂದು ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣವೇನು? : 2000ರ ಡಿಸೆಂಬರ್ 17ರಂದು ರಾತ್ರಿ 8:45ರ ಹೊತ್ತಿಗೆ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಆರೋಪಿಗಳು ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹುಸೇನ್ ಯಾನೆ ಮೊಹಮ್ಮದ್ ಹುಸೇನ್, ಬಶೀರ್ ಮತ್ತು ಮೊಯ್ದೀನ್ ಕುದ್ರೋಳಿ ಆರೋಪಿಗಳಾಗಿದ್ದು, ಹುಸೇನ್ ಮತ್ತು ಮೊಯ್ದಿನ್ ಕುದ್ರೋಳಿ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಬಶೀರ್ ಎಂಬಾತ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಗುಜರಾತ್ನಲ್ಲಿ 23 ವರ್ಷಗಳ ಕಾಲ ನೆಲೆಸಿದ್ದ. ಇದೀಗ ಉಳ್ಳಾಲಕ್ಕೆ ವಾಪಸ್ ಬಂದಿದ್ದು, ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಸಾಲ ಪಡೆದ ವ್ಯಕ್ತಿಯ ಫೋಟೋ ಅಶ್ಲೀಲವಾಗಿ ಎಡಿಟ್: ಲೋನ್ ಆಯಪ್ನಲ್ಲಿ ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರು, ಲೋನ್ ಆಯಪ್ ಹಾಕಿ 3500 ರೂ. ಸಾಲಕ್ಕೆ ಅರ್ಜಿ ಹಾಕಿದ್ದರು. ಅವರ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮೆ ಆಗಿತ್ತು. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರು ಪಾವತಿ ಮಾಡಬೇಕಾಗಿದ್ದುದರಿಂದ ಜು.19 ರಂದು 1400 ರೂ. ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಜು.26 ರಂದು ಆಯಪ್ ಕಳುಹಿಸಿಕೊಟ್ಟ ವ್ಯಕ್ತಿಗೆ ಹಂತ ಹಂತವಾಗಿ 4,200 ರೂ. ಪಾವತಿ ಮಾಡಿರುತ್ತಾರೆ.