Breaking News

ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದಾರೆ.

Spread the love

ಬೆಂಗಳೂರು: ನಿನ್ನೆ 10 ಮಂದಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದಾರೆ.

ವಿರೋಧ ಪಕ್ಷಗಳ ಗೈರುಹಾಜರಿ ನಡುವೆಯೇ ವಿಧಾನಮಂಡಲದ ಕಲಾಪ ಇಂದು ಆರಂಭಗೊಳ್ಳುವ ಮೂಲಕ ಮತ್ತೊಂದು ಅನಪೇಕ್ಷಣೀಯ ವಿದ್ಯಮಾನ ನಡೆದಿದೆ.

ವಿಧಾನಮಂಡಲದ 30 ವರ್ಷಗಳ ಇತಿಹಾಸದಲ್ಲಿ ಪ್ರತಿಪಕ್ಷಗಳು ಸಂಪೂರ್ಣ ಬಹಿಷ್ಕಾರ ಹಾಕಿ ಅದರ ಬಳಿಕವೂ ಕಲಾಪ ನಡೆದ ಉದಾಹರಣೆ ಇಲ್ಲ. ಪ್ರಜಾಸತ್ತಾತ್ಮಕ ವಿಷಯಗಳಿಗಾಗಿ ಹಲವಾರು ಬಾರಿ ಪ್ರತಿಭಟನೆಗಳಾಗಿವೆ. ಆ ವೇಳೆ ಸಭಾತ್ಯಾಗ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಬಹಿಷ್ಕಾರದಂತಹ ಪ್ರತಿಭಟನೆಗಳು ನಡೆದಿರಲಿಲ್ಲ.

ಜು.18 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಕೂಟದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಾಯಕರ ಆತಿಥ್ಯಕ್ಕೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನೇಮಿಸಿರುವುದನ್ನು ವಿರೋಧಿಸಿ ಜೆಡಿಎಸ್ ಮತ್ತು ಬಿಜೆಪಿ ನಿನ್ನೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಧರಣಿ ಸತ್ಯಾಗ್ರಹ ನಡೆಸಿತ್ತು. ಅದರ ನಡುವೆಯೂ ಕಲಾಪಗಳು ಮುಂದುವರೆದಿದ್ದವು. 5 ವಿಧೇಯಕಗಳು ಅಂಗೀಕಾರಗೊಂಡಿದ್ದವು.

ಭೋಜನಾ ವಿರಾಮಕ್ಕೂ ಬಿಡುವು ನೀಡದೆ ಸಭಾಧ್ಯಕ್ಷರು ವಿತ್ತೀಯ ಮೇಲಿನ ಕಾರ್ಯಕಲಾಪಗಳನ್ನು ಮುಂದುವರೆಸಿದ್ದರು. ಶಾಸಕ ಪಿ. ಎಂ. ನರೇಂದ್ರಸ್ವಾಮಿ ಮಾತನಾಡುತ್ತಿದ್ದ ವೇಳೆ ಸಿಟ್ಟಿಗೆದ್ದ ಧರಣಿ ನಿರತ ವಿರೋಧಪಕ್ಷದ ಶಾಸಕರು ಪೇಪರ್​ನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದ್ದರು.

ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಗಲಾಟೆ ತಹಬದಿಗೆ ಬರಲಿಲ್ಲ. ಈ ವೇಳೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಬಳಿಕ ಸದನ ಸಮಾವೇಶಗೊಂಡಾಗ ಸ್ಪೀಕರ್ ಯು ಟಿ ಖಾದರ್ ಅವರು ಉಪಾಧ್ಯಕ್ಷರ ಮೇಲೆ ಅನುಚಿತ ವರ್ತನೆ ತೋರಿಸಿದ ಬಿಜೆಪಿಯ 10 ಮಂದಿ ಶಾಸಕರನ್ನು ಈ ಅಧಿವೇಶನದ ಮುಗಿಯುವವರೆಗೆ ಮಟ್ಟಿಗೆ ಅಮಾನತುಗೊಳಿಸಿದರು.

ಈ ಕ್ರಮವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್​ನ ಶಾಸಕರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಧರಣಿ ನಡೆಸುತ್ತಿದ್ದರು. ಪೊಲೀಸರನ್ನು ಬಳಸಿಕೊಂಡು ಅವರನ್ನು ಹೊರಹಾಕಲಾಯಿತು. ಬಲವಾಗಿ ವಿರೋಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಇಂದು ಬೆಳಗ್ಗೆ ಕಲಾಪಕ್ಕೆ ಗೈರುಹಾಜರಾಗಿದ್ದಾರೆ.

ನಿನ್ನೆ ಬಿಜೆಪಿ ನಾಯಕರು ಹೇಳಿದ ಪ್ರಕಾರ, ಬಾಕಿ ಇರುವ 2 ದಿನದ ಕಲಾಪವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಈ ರೀತಿಯ ಬಹಿಷ್ಕಾರ ಇದೇ ಮೊದಲ ಬಾರಿ ಎಂದು ಹೇಳಲಾಗಿದೆ. ಯಾವುದೇ ಗದ್ದಲ, ಕೋಲಾಹಲ ಪರಿಸ್ಥಿತಿ ಇದ್ದರೂ ಕೂಡ ಪ್ರತಿಭಟನಾನಿರತ ಶಾಸಕರು ಕಲಾಪದಲ್ಲಿ ಭಾಗವಹಿಸಿ ಸದನದ ಒಳಗೆ ಹೋರಾಟ ನಡೆಸಿದ ಉದಾಹರಣೆಗಳಿವೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ