ಹುಬ್ಬಳ್ಳಿ: ಬಂಗಾರದ ಆಸೆಗೆ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಹೊರವಲಯದಲ್ಲಿ ಕಳೆದ ಮೇ 27 ರಂದು ವೃದ್ಧೆಯೊಬ್ಬರ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಹರವಿ ಗ್ರಾಮದ ಮಲ್ಲಪ್ಪ ಹುಲ್ಲಂಬಿ (54) ಬಂಧಿತ ಆರೋಪಿ.
ಪ್ರಕರಣದ ವಿವರ: ಮೇ 27 ರಂದು ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ತಿಪ್ಪವ್ವ ತಂಬೂರ(82) ಎಂಬ ವೃದ್ಧೆಯನ್ನು ಹತ್ಯೆ ಮಾಡಲಾಗಿತ್ತು. ಆಲದಕಟ್ಟೆ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬು ಬೆಳೆದ ಜಮೀನಿನಲ್ಲಿ ಕೊಲೆ ಮಾಡಿ ವೃದ್ಧೆಯ ಕೊರಳಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಕಲಘಟಗಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು. ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಬಂಗಾರಪೇಟೆಯಲ್ಲಿ ವೃದ್ಧೆಯ ಕೊಲೆ: ಚಿನ್ನಾಭರಣಕ್ಕಾಗಿ ಪಕ್ಕದ ಮನೆಯ ಸ್ನೇಹಿತೆಯಿಂದಲೇ ಕೃತ್ಯ
ಆರೋಪಿ ಕೆಲವು ದಿನಗಳ ಹಿಂದೆ ಈ ವೃದ್ಧೆ ಜತೆ 10 ಸಾವಿರ ರೂ.ಸಾಲ ಪಡೆದಿದ್ದನಂತೆ. ಅಲ್ಲದೇ ಗ್ರಾಮದಲ್ಲಿ ಹಲವು ಕಡೆ ಸಾಲ ಮಾಡಿಕೊಂಡಿದ್ದನಂತೆ. ಕೊಟ್ಟ ಸಾಲ ಮರಳಿ ಕೊಡು ಎಂದು ವೃದ್ಧೆ ಕೇಳಿದ್ದರಂತೆ. ಈ ನಡುವೆ ಆರೋಪಿ ಅವರ ಕೊರಳಲ್ಲಿದ್ದ ಬಂಗಾರದ ಆಭರಣದ ಮೇಲೆ ಕಣ್ಣು ಹಾಕಿದ್ದ. ಮೇ 27 ವೃದ್ಧೆ ಕಲಘಟಗಿಯಿಂದ ಮರಳಿ ಆಲದಕಟ್ಟಿ ಗ್ರಾಮಕ್ಕೆ ಹೋಗುವಾಗ ಅವಳ ಜೊತೆಯಲ್ಲಿ ತೆರಳಿದ್ದ.
ಆಲದಕಟ್ಟಿ ಕ್ರಾಸ್ಗೆ ಮಹಿಳೆ ಇಳಿದದ್ದನ್ನು ಕಂಡು ಇವನು ಅಲ್ಲೇ ಇಳಿದಿದ್ದ. ಸ್ವಲ್ಪ ದೂರು ಹೋಗಿ ನಿನಗೆ ಉಪ್ಪಿನಕಾಯಿ ಹಾಕಲಿಕ್ಕೆ ನಮ್ಮ ಹೊಲದಲ್ಲಿ ಮಾವಿನಕಾಯಿ ಕೊಡುತ್ತೇನೆ ಬಾ ಎಂದು ಸುಳ್ಳು ಹೇಳಿ ರಸ್ತೆಯ ಪಕ್ಕದ ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಕಲಘಟಗಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.