Breaking News

ಆರ್​ಟಿಐಯಡಿ ಕೇಳಿದ ಮಾಹಿತಿ ನಿರಾಕರಣೆ: ಮಹೇಶ್​ ಜೋಷಿಗೆ ದಂಡ ವಿಧಿಸಿದ ಹೈಕೋರ್ಟ್

Spread the love

ಬೆಂಗಳೂರು: ಬೆಂಗಳೂರಿನ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಕೇಂದ್ರ ಮಾಹಿತಿ ಅಧಿಕಾರಿಯಾಗಿದ್ದ ಹಾಲಿ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷರಾಗಿರುವ ಮಹೇಶ್​ ಜೋಷಿ ಅವರಿಗೆ ಹೈಕೋರ್ಟ್ 50 ಸಾವಿರ ರೂ.

ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸಾರ್ವಜನಿಕರ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದ ಮೇಲ್ಮನವಿ ಪ್ರಾಧಿಕಾರದ ಸೂಚನೆ ಹಾಗೂ ಮಾಹಿತಿ ನೀಡಲು ವಿಳಂಬ ಮಾಡಿದ್ದರ ಪರಿಣಾಮ ವಿಧಿಸಿದ್ದ ದಂಡವನ್ನು ರದ್ದು ಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ಮಹೇಶ್​ ಜೋಷಿಗೆ ಹೈಕೋರ್ಟ್ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಸ್ಥಾಪನೆಯಾಗಿರುವ ಎರಡನೇ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ, ಮಹೇಶ್​ ಜೋಶಿ ಸಲ್ಲಿಸಿದ್ದ ಪ್ರತ್ಯೇಕ ಎರಡು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎನ್​.ಎಸ್​. ಸಂಜಯ್​ ಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ಕೊಟ್ಟಿದೆ.

ಸಬೂಬು ನೀಡಿ ಮಾಹಿತಿ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು: ಕಾಯ್ದೆಯ ಪ್ರಕಾರ ಸಾರ್ವಜನಿಕರು ಯಾವುದೇ ಮಾಹಿತಿ ಕೇಳಿದರೂ ಸಂಬಂಧಪಟ್ಟ ಅಧಿಕಾರಿಗಳು ನಿರಾಕರಿಸುವಂತಿಲ್ಲ. ಅಲ್ಲದೆ, ಕೋರಿದ ಮಾಹಿತಿಗೆ ಕಾರಣವನ್ನು ನೀಡಿಲ್ಲ ಎಂಬುದಾಗಿ ಸಬೂಬು ನೀಡಿ ಮಾಹಿತಿ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಅರ್ಜಿದಾರರ ವಾದ ಅಂಗೀಕರಿಸಿದಲ್ಲಿ ಕಾಯ್ದೆಯನ್ನು ನಿಷ್ಪ್ರಯೋಜಕ ಗೊಳಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ.

ಕಾಯ್ದೆ ಪ್ರಕಾರ ಮಾಹಿತಿ ಅಧಿಕಾರಿಯು ಸಾರ್ವಜನಿಕರು ಕೇಳಿದ ಮಾಹಿತಿಯನ್ನು ನಿಯಮಗಳ ಪ್ರಕಾರ ಒದಗಿಸುಬೇಕಾಗುತ್ತದೆ. ಇದನ್ನು ಹೊರತು ಪಡಿಸಿ ಇತರೆ ಅಧಿಕಾರ ಇಲ್ಲ. ಆದರೆ, ಮೇಲ್ಮನವಿ ಪ್ರಾಧಿಕಾರ ನೀಡಿದ ಆದೇಶ ಪಾಲಿಸುವ ಬದಲು ಅದನ್ನು ಪ್ರಶ್ನೆ ಮಾಡುವುದಕ್ಕೆ ಮುಂದಾಗಿದ್ದಾರೆ. ಜೊತೆಗೆ, ಈ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಅಧಿಕಾರವನ್ನು ಹೊಂದಿಲ್ಲ. ಹೀಗಾಗಿ ಅರ್ಜಿ ವಿಚಾರಣೆಗೆ ಅರ್ಹವಿಲ್ಲ ಎಂದು ತಿಳಿಸಿ 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಎರಡನೇ ಮೇಲ್ಮನವಿ ಪ್ರಾಧಿಕಾರ 25 ಸಾವಿರ ರೂ.ಗಳ ದಂಡ ವಿಧಿಸಿದ್ದ ಕ್ರಮವನ್ನು ಎತ್ತಿ ಹಿಡಿದಿದೆ. ಹೀಗಾಗಿ ಜೋಷಿ 50 ಸಾವಿರ ದಂಡ ಪಾವತಿಸಬೇಕಾಗಿದೆ.

ಪಾರದರ್ಶಕತೆ ಕಾಯ್ದುಕೊಳ್ಳಲು ಆರ್​ಟಿಐ ಜಾರಿ- ಹೈಕೋರ್ಟ್​: ಸರ್ಕಾರದ ಕಾರ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಸರ್ಕಾರದ ಎಲ್ಲ ಸೇವೆಗಳಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ಮಾಹಿತಿ ಹಕ್ಕು ಕಾಯಿದೆ 2005ನ್ನು ಜಾರಿ ಮಾಡಲಾಗಿದ್ದು, ಇದಕ್ಕಾಗಿ ಮಾಹಿತಿ ಅಧಿಕಾರಿ ಹುದ್ದೆ ಸೃಷ್ಟಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಈ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕೇಳಿದ ಮಾಹಿತಿ ಒದಗಿಸುವುದು ಜವಾಬ್ದಾರಿಯಾಗಿದೆ ಎಂದು ಪೀಠ ತಿಳಿಸಿದೆ.

ಪ್ರಕರಣಗಳ ಹಿನ್ನೆಲೆ ಏನು?: ದೂರದರ್ಶನಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು 2009ರ ಫೆಬ್ರವರಿ 26 ರಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಮಾಹಿತಿ ಒದಗಿಸಿರುವುದಿಲ್ಲ. ಮೊದಲನೇ ಮೇಲ್ಮನವಿ ಪ್ರಾಧಿಕಾರವ 15 ದಿನದಲ್ಲಿ ಮಾಹಿತಿ ಒದಗಿಸುವಂತೆ 2009ರ ಮೇ 5ರಂದು ಸೂಚನೆ ನೀಡಿತ್ತು. ಆದರೂ ಮಾಹಿತಿ ಒದಗಿಸಿರಲಿಲ್ಲ. ಇದರಿಂದ ಅರ್ಜಿದಾರರು 2009ರ ಸೆಪ್ಟಂಬರ್​ 21 ರಂದು ಎರಡನೇ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಎರಡನೇ ಮೇಲ್ಮನವಿ ಪ್ರಾಧಿಕಾರ ಕೇಳಿದ ಮಾಹಿತಿಯನ್ನು 10 ದಿನದಲ್ಲಿ ಒದಗಿಸುವಂತೆ ಸೂಚನೆ ನೀಡಿದ್ದರು. ಈ ಸಂಬಂಧ ಸಿಐಪಿಒ ಅವರಿಗೆ ಸಂಸ್ಥೆಯ ಇತರೆ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಅಲ್ಲದೆ, ದೂರಿಗೆ ಸಂಬಂಧಿಸಿದಂತೆ ಕಾಯಿದೆಯ ಮೂಲಕ ಮಾಹಿತಿಯನ್ನು ಪಡೆದು ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಮಾಹಿತಿಯನ್ನು ನೀಡುವುದಕ್ಕೆ ನಿರಾಕರಿಸಿರುವುದಾಗಿ ತಿಳಿಸಿದ್ದರು.

ಉಚಿತವಾಗಿ ಮಾಹಿತಿ ಒದಗಿಸುವಂತೆ ಸೂಚನೆ ಪ್ರಶ್ನಿಸಿ ಅರ್ಜಿ : ಮತ್ತೊಂದು ಅರ್ಜಿಗೆ ಸಂಬಂಧಿಸಿಧಂತೆ ಸಾರ್ವಜನಿರು 2008ರ ಆಗಸ್ಟ್​ 13 ರಿಂದ ಆಗಸ್ಟ್​ 29ರ ವರೆಗೆ 9 ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಅವರಿಗೂ ಮಾಹಿತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಈ ಸಂಬಂಧ ಕೇಂದ್ರ ಮಾಹಿತಿ ಆಯೋಗದ ಸಲಹೆಗಾಗಿ ಕಾಯುತ್ತಿರುವುದಾಗಿ ತಿಳಿಸಲಾಗಿತ್ತು. ಬಳಿಕ ಮಾಹಿತಿ ಲಭ್ಯವಿದ್ದು ಒದಗಿಸಲು 18,240 ರೂ.ಗಳನ್ನು ಪಾವತಿಸಬೇಕು ಎಂದು ಸೂಚಿಸಿದ್ದರು. ಇದಾದ ಐದು ದಿನಗಳ ಬಳಿಕ 50,160 ರೂ.ಗಳನ್ನು ಪಾವತಿಸಿ ಮಾಹಿತಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರು.

ಇದನ್ನು ಪ್ರಶ್ನಿಸಿ ಮಾಹಿತಿ ಕೋರಿದ್ದವರು ಎರಡನೇ ಮೇಲ್ಮನವಿ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಪ್ರಾಧಿಕಾರ ಯಾವುದೇ ಹಣವನ್ನು ಪಡೆಯದೇ ಎರಡು ವಾರಗಳಲ್ಲಿ ಮಾಹಿತಿ ಒದಗಿಸುವಂತೆ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಮಹೇಶ್​ ಜೋಶಿ, ದಂಡ ವಿಧಿಸಿರುವುದನ್ನು ಪ್ರಶ್ನೆ ಮಾಡುವುದಕ್ಕೆ ಸ್ವಾತಂತ್ರ್ಯರಿದ್ದರೂ, ಅದನ್ನು ಮಾತ್ರ ಪ್ರಶ್ನೆ ಮಾಡದೆ ಮಾಹಿತಿ ಒದಗಿಸುವಂತೆ ಸೂಚನೆ ನೀಡಿದ್ದ ಕ್ರಮವನ್ನು ಸೇರಿಸಿ ಹೈಕೋಟ್​ರ್ಗೆ ಅರ್ಜಿ ಸಲ್ಲಿಸಿದ್ದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ