ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ₹ 47.43 ಕೋಟಿ ಮೌಲ್ಯದ ನಗದು, ಮದ್ಯ, ಮತದಾರರಿಗೆ ಆಮಿಷ ಒಡ್ಡಲು ಬಳಸುವ ವಸ್ತುಗಳು, ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ, ಒಟ್ಟು ₹ 12.82 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ₹ 16.02 ಕೋಟಿ ಮೌಲ್ಯದ 2.78 ಲಕ್ಷ ಲೀಟರ್ ಮದ್ಯ, ₹ 6.72 ಕೋಟಿ ಮೌಲ್ಯದ 13.5 ಕೆ.ಜಿ. ಚಿನ್ನ, ₹ 63.98 ಲಕ್ಷ ಮೌಲ್ಯದ 88.7 ಕೆ.ಜಿ. ಬೆಳ್ಳಿ, ₹ 41.26 ಲಕ್ಷ ಮೌಲ್ಯದ 79.44 ಕೆ.ಜಿ. ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಮತದಾರರಿಗೆ ಆಮಿಷ ಒಡ್ಡಲು ಬಳಸುವುದಕ್ಕಾಗಿ ಸಂಗ್ರಹಿಸಿದ್ದ ಹಾಗೂ ಸಾಗಿಸುತ್ತಿದ್ದ ₹ 10.79 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಅಕ್ರಮಗಳಲ್ಲಿ ಭಾಗಿಯಾದ ಆರೋಪದಡಿ ಒಟ್ಟು 270 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ವಿವರ ನೀಡಿದೆ.
ಚುನಾವಣಾ ಅಕ್ರಮದ ಆರೋಪದಡಿ ಒಟ್ಟು 316 ಎಫ್ಐಆರ್ಗಳನ್ನು ದಾಖಲು ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 1,416 ಪ್ರಕರಣ ದಾಖಲಿಸಿ, 1,869 ಜನರಿಂದ ಬಾಂಡ್ ಭದ್ರತೆ ಪಡೆಯಲಾಗಿದೆ ಎಂದು ತಿಳಿಸಿದೆ.