ಕೊಪ್ಪಳ/ಗಂಗಾವತಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನೂತನವಾಗಿ ಆರಂಭಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ವಿವಿಧ ಪಕ್ಷಗಳ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ.
ಈಗಾಗಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಆಪ್ತ ಅಲಿಖಾನ್ ಸಹಾಯದಿಂದ ಮುಸ್ಲಿಂ, ಪರಿಶಿಷ್ಟಜಾತಿ, ಕುರುಬ ಸೇರಿ ಸಮಾಜದ ಮುಖಂಡರನ್ನು ಸೆಳೆಯಲು ವಿವಿಧ ರೀತಿಯ ರಣತಂತ್ರ ಹೂಡಿ, ಪ್ರಯೋಗ ಮಾಡಿದ್ದು, ವಿವಿಧ ಸಮಾಜದ ಮುಖಂಡರು ರೆಡ್ಡಿ ಪಕ್ಷಕ್ಕೆ ಸೇರುತ್ತಿದ್ದಾರೆ.
ಅಲ್ಪಸಂಖ್ಯಾತರ ಮುಖಂಡ ಸೈಯದ್ ಅಲಿ, ಧರ್ಮಗುರು ನೂರು ದ್ದೀನ್ ಖಾದ್ರಿ, ಚಿಕ್ಕಬೆಣಕಲ್ ಬೆಟ್ಟಪ್ಪ, ಹೊಸಳ್ಳಿ ಶಿವಪ್ಪ ಸೇರಿ ಮುಸ್ಲಿಂ, ಕುರುಬ ಸಮಾಜದ ಮುಖಂಡರು ಇದ್ದರು.
ಶಕ್ತಿ ಪ್ರದರ್ಶನ: ಗಂಗಾವತಿಯನ್ನು ಕೇಂದ್ರವಾಗಿಟ್ಟುಕೊಂಡು ರಾಜಕೀಯ ಬದುಕಿನ ಎರಡನೇ ಇನಿಂಗ್ಸ್ ಆರಂಭಿಸಿರುವ ರೆಡ್ಡಿ ತಮ್ಮ ಬೆಂಬಲಿಗರ ಮೂಲಕ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೇರೆ ಬೇರೆ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿಸುತ್ತಿದ್ದಾರೆ. ಜೊತೆಗೆ ಹಂತಹಂತವಾಗಿ ಪಕ್ಷದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅದರ ಭಾಗವಾಗಿಯೇ ಮಂಗಳವಾರ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುದಗುಂಪಾದಿಂದ ಅವರ ಬೆಂಬಲಿಗರು ಗಂಗಾವತಿ ತನಕ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದಾರೆ. ಬಳಿಕ ವನಬಳ್ಳಾರಿಯಲ್ಲಿ ಕುರುಬ ಸಮಾಜದ ಪ್ರಮುಖ ಹಾಗೂ ಇಕ್ಬಾಲ್ ಅನ್ಸಾರಿ ಅವರ ಆಪ್ತರಲ್ಲಿ ಒಬ್ಬರಾದ ಹನುಮಂತಪ್ಪ ಅರಸಿನಕೇರಿ ಅವರನ್ನು ಭೇಟಿಯಾಗಲಿದ್ದಾರೆ. ಇದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗೆ ವನಬಳ್ಳಾರಿಯಲ್ಲಿ ನಡೆದಿದ್ದ ಹನುಮಂತಪ್ಪ ಅವರ ಕುಟುಂಬದವರ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಸತೀಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು
ಪಾಲ್ಗೊಂಡಿದ್ದರು.