ಶಿವಮೊಗ್ಗ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಂದರೆ ಎದುರಿ ಸಲು ಕಾಂಗ್ರೆಸ್ ಪಕ್ಷ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವ ಧಿಗೂ ಮುನ್ನ ಚುನಾವಣೆ ಬರುತ್ತದೆಯೇ ಎಂಬ ಬಗ್ಗೆ ಏನನ್ನೂ ಹೇಳುವುದಿಲ್ಲ.
ಇದು ಸರಕಾರಕ್ಕೆ ಬಿಟ್ಟ ವಿಚಾರ. ನಾವಂತೂ ಚುನಾವಣೆಗೆ ಸನ್ನದ್ಧರಾಗಿದ್ದೇವೆ ಎಂದು ಹೇಳಿದರು.
ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ನಡೆದಿರುವ ಸಿದ್ಧತೆಗಳ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ನಲ್ಲಿ ಬಿರುಕಿದೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಜೆಪಿಯವರ ಮನೆಯಲ್ಲೇ ಹನ್ನೆರಡು ಬಾಗಿಲುಗಳಾಗಿವೆ. ಅವರದ್ದು ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರವಾಗಿದೆ. ಅವರಲ್ಲಿ ಏನೆಲ್ಲ ನೋವಿದೆ ಎಂಬ ಬಗ್ಗೆ ಈಶ್ವರಪ್ಪ ಅವರನ್ನೇ ಕೇಳಿ ಎಂದರು.
ಖರ್ಗೆ ಸ್ವಾಗತಕ್ಕೆ ತಯಾರಿ
ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನ.6ರಂದು ಬೆಂಗಳೂರಿಗೆ ಆಗಮಿಸಲಿದ್ದು, ಕೆಪಿಸಿಸಿ ವತಿಯಿಂದ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಆ ಬಗ್ಗೆ ರವಿವಾರ ಪೂರ್ವಭಾವಿ ಸಭೆ ನಡೆಯಲಿದೆ ಎಂದೂ ಅವರು ಹೇಳಿದರು.
ಐವತ್ತು ವರ್ಷಗಳ ಬಳಿಕ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದು ಇಡೀ ರಾಜ್ಯಕ್ಕೆ ಸಂತೋಷ ತಂದಿದೆ. ಖರ್ಗೆ ಅಧ್ಯಕ್ಷತೆ ರಾಜ್ಯಕ್ಕೆ ದೊಡ್ಡ ಶಕ್ತಿ ತಂದಿದೆ ಎಂದರು.
ಖರ್ಗೆಯವರ ನಿಷ್ಠೆ-ಪ್ರಾಮಾಣಿಕತೆ ಗುರುತಿಸಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದ್ದು, ಇದು ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ನಲ್ಲಿ ಮಾತ್ರ ಇದು ಸಾಧ್ಯ. ಬಿಜೆಪಿಯ “ಆಪರೇಷನ್ ಕಮಲ’ದ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿದೆ. ತೆಲಂಗಾಣದಲ್ಲಿ ಆಪರೇಶನ್ ಕಮಲದ ಪ್ರಯತ್ನ ನಡೆದಿದೆ.
ಕರ್ನಾಟಕ ಸಹಿತ ದೇಶದ ಇತರೆಡೆಗಳಲ್ಲೂ ಆಪರೇಶನ್ ಕಮಲ ನಡೆದಿದ್ದು, ಮನಿ ಲಾಂಡ್ರಿಂಗ್ ಕಾಯ್ದೆಯಡಿ ಸುಮೊಟೊ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕೋರಲಾಗಿದೆ ಎಂದರು.
Laxmi News 24×7