ಈ ಸ್ಮಶಾನ ಭೂಮಿಯನ್ನು ವಿವಿಧ ಸಂಘಟನೆಗಳು ಕೂಡಿಕೊಂಡು ನಂದನವನವಾಗಿ ಅಭಿವೃದ್ಧಿ ಮಾಡಿದ್ದರು. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಈ ಸ್ಮಶಾನ ಭೂಮಿ ಹಲವು ಸಮಸ್ಯೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಇದು ಸ್ಮಶಾನವೋ..? ಗಾಡಿ ಪಾರ್ಕಿಂಗ್ ಜಾಗವೋ..? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಎಲ್ಲಿ ಬೇಕಾದಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳು, ಕಸ ವಿಲೇವಾರಿ ವಾಹನಗಳು, ಹದಗೆಟ್ಟ ರಸ್ತೆ. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಪ್ರಸಿದ್ಧ ಸದಾಶಿವ ನಗರ ಸ್ಮಶಾನ ಭೂಮಿಯಲ್ಲಿನ ಅವ್ಯವಸ್ಥೆಯ ದೃಶ್ಯಗಳನ್ನು.
ಹೌದು ಸದಾಶಿವನಗರ ಸ್ಮಶಾನ ಬೆಳಗಾವಿಯ ಬಹುಮುಖ್ಯ ಸ್ಮಶಾನವಾಗಿದೆ. ಸದಾಶಿವನಗರ, ನೆಹರು ನಗರ, ಮಹಾಂತೇಶ ನಗರ, ಶ್ರೀನಗರ, ವಿಶ್ವೇಶ್ವರಯ್ಯ ನಗರ, ಸಹ್ಯಾದ್ರಿ ನಗರ, ಅಶೋಕ ನಗರ, ಗಾಂಧಿನಗರ, ಗೋಂಧಳಿ ಗಲ್ಲಿ, ಬಾಪಟ್ ಗಲ್ಲಿ, ಕಡೋಲ್ಕರ್ ಗಲ್ಲಿ ಸೇರಿದಂತೆ ಅನೇಕ ಪ್ರದೇಶಗಳ ಜನರು ಮೃತರಾದಾಗ ಅಂತ್ಯಕ್ರಿಯೆ ಮಾಡೋದು ಇದೇ ಸ್ಮಶಾನದಲ್ಲಿ. ಈ ಸ್ಮಶಾನವನ್ನು ಸದಾಶಿವನಗರ ಸ್ಮಶಾನ ಭೂಮಿ ಸುಧಾರಣಾ ಮಂಡಳ, ಹಿಂದೂ ಸೇವಾ ಸಂಘಟನೆ, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಸಂಘಟನೆ ಸೇರಿ ಇನ್ನಿತರ ಸಂಘಟನೆಗಳು ಕೂಡಿಕೊಂಡು ಈ ಸ್ಮಶಾನವನ್ನು ನಂದನವನವನ್ನಾಗಿ ಅಭಿವೃದ್ಧಿ ಮಾಡಿದ್ದರು. ಆದರೆ ಇದೀಗ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಸರಿಯಾದ ನಿರ್ವಹಣೆ ಆಗದ ಹಿನ್ನೆಲೆ ಈ ಸ್ಮಶಾನವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಮಾಜಿ ಮೇಯರ್ ವಿಜಯ್ ಮೋರೆ ವಿವಿಧ ಸಂಘಟನೆಗಳು ಸೇರಿಕೊಂಡು ಕಳೆದ 20 ವರ್ಷಗಳಿಂದ ಈ ಸ್ಮಶಾನವನ್ನು ನಂದನವನ ಮಾಡಿದ್ದೇವು. ಆದರೆ ಇಂದು ಇಲ್ಲಿ ಬಂದು ನೋಡಿದ್ರೆ ಈ ಸ್ಮಶಾನದಲ್ಲಿ ಪಾರ್ಕಿಂಗ್ ಸಲುವಾಗಿ ಪಾಲಿಕೆಯವರು ಬಳಸುತ್ತಿದ್ದಾರೆ. ಬೇಡವಾದ ಎಲ್ಲಾ ಸಾಮಾನುಗಳನ್ನು ಇಲ್ಲಿ ಹಾಕಿ ವಾತಾವರಣ ಎಲ್ಲಾ ಹೊಲಸು ಮಾಡಿದ್ದಾರೆ. ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ ಅವರು ನೀವು ಒಳ್ಳೆಯ ಅಧಿಕಾರಿಗಳಿದ್ದಿರಿ, ನೀವು ಬಡ್ತಿ ಹೊಂದಿ ಬೇರೆ ಕಡೆ ಹೋದಾಗ ಇಲ್ಲಿನ ಜನ ನಿಮ್ಮನ್ನು ನೆನಸುವ ಕೆಲಸ ಮಾಡಬೇಕು. ಸ್ಮಶಾನದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಎಲ್ಲಿ ಬೇಕಾದಲ್ಲಿ ಗಾಡಿ ಪಾರ್ಕಿಂಗ್ ಮಾಡಿದ್ದಾರೆ. ಬರುವ 8 ದಿನಗಳಲ್ಲಿ ಸ್ಮಶಾನವನ್ನು ಸ್ವಚ್ಛ ಮಾಡಿ, ಇಲ್ಲಿನ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ರೆ ನಮಗೆ ಏನು ಮಾಡಬೇಕು ಅಂತಾ ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.