ಬೆಳಗಾವಿ: ಇಲ್ಲಿನ ಕೆಎಲ್ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ದೀಪಾವಳಿ ಅಂಗವಾಗಿ ದೀಪೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೆ.ಎನ್. ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಈಚೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎನ್.ಎಸ್.
ಮಹಾಂತಶೆಟ್ಟಿ, ‘ಮಹಿಳಾ ಸಬಲೀಕರಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವಲ್ಲಿ ಈ ಸಂಘ ಕ್ರಿಯಾಶೀಲವಾಗಿದೆ. ಶಿಕ್ಷಣ, ಸಂಘಟನೆ, ಧೈರ್ಯ ನೀಡುವುದರೊಂದಿಗೆ ಸಮಾಜದಲ್ಲಿ ಸ್ವಾಭಿಮಾನಿ ಆಗಲು ಬೇಕಾದ ತರಬೇತಿಗಳನ್ನು ನೀಡುತ್ತಿದೆ’ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಹಿಳೆಯರನ್ನು ಸಂಘದ ಅಧ್ಯಕ್ಷೆ ಆಶಾತಾಯಿ ಕೋರೆ ಸನ್ಮಾನಿಸಿದರು. ಸಂಘದ ಉಪಾಧ್ಯಕ್ಷರಾದ ಡಾ.ಅಲ್ಕಾ ಕಾಳೆ, ಡಾ.ಸುಜಾತಾ ಜಾಲಿ, ಮುಖ್ಯ ಸಂಯೋಜಕರಾದ ಡಾ.ಪ್ರೀತಿ ದೊಡವಾಡ, ಕಾರ್ಯದರ್ಶಿ ಡಾ.ನೇಹಾ ಧಡೇದ ಇತರರು ಇದ್ದರು. ಡಾ.ಅಸಾವರಿ ಸಂತ ಹಾಗೂ ರಾಹುಲ್ ಗೀತೆ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ಣಾಯಕರಾಗಿ ಕೆಲಸ ಮಾಡಿದರು.
ಮಹಿಳೆಯರಿಗಾಗಿ ರಂಗೋಲಿ, ಪೇಂಟಿಂಗ್, ಮೆಹಂದಿ, ಪೂಜಾ ಥಾಲಿ, ನೃತ್ಯ, ವರಮಹಾಲಕ್ಷ್ಮಿ ಅಲಂಕಾರ, ನೇಲ್ ಆರ್ಟ್ ಸೇರಿದಂತೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.