ನವದೆಹಲಿ : ಬಾಲಿವುಡ್ ಹಾಸ್ಯನಟ ರಾಜು ಶ್ರೀವಾಸ್ತವ ಅವರು ಬುಧವಾರ ದೆಹಲಿಯ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಜಿಮ್ನಲ್ಲಿ ವ್ಯಾಯಾಮ ಮಾಡುವ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ರಾಜು ಅವರನ್ನು ಆಗಸ್ಟ್ 10 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ಮಾಧ್ಯಮಗಳಿಗೆ ದೃಢಪಡಿಸಿದೆ.
ಡಿಸೆಂಬರ್ 25, 1963 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸತ್ಯ ಪ್ರಕಾಶ್ ಶ್ರೀವಾಸ್ತವ ಜನಿಸಿದರು.
ಉತ್ತರ ಪ್ರದೇಶದ ರಾಜು ಶ್ರೀವಾಸ್ತವ್ ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋ ಮೂಲಕ ಬಾರಿ ಜನಪ್ರಿಯತೆ ಗಳಿಸಿದ್ದರು. 1980 ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ಸಲ್ಮಾನ್ ಖಾನ್ ಅಭಿನಯದ ಮೈನೆ ಪ್ಯಾರ್ ಕಿಯಾ, ಶಾರುಖ್ ಖಾನ್ ಅವರ ಬಾಜಿಗರ್ ಮತ್ತು ಬಾಂಬೆ ಟು ಗೋವಾ ಸೇರಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜು ಶ್ರೀವಾಸ್ತವ್ ಅವರು ‘ದಿ ಕಪಿಲ್ ಶರ್ಮಾ ಶೋ’, ‘ಶಕ್ತಿಮಾನ್’, ‘ಕಾಮಿಡಿ ಸರ್ಕಸ್’, ‘ಲಾಫ್ ಇಂಡಿಯಾ ಲಾಫ್’, ‘ನಚ್ ಬಲಿಯೇ’ ಬಿಗ್ ಬಾಸ್ ಸೀಸನ್ 3 ಶೋ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ, ಜನರನ್ನು ನಕ್ಕು ನಗಿಸಿದ್ದಾರೆ.