ಬೆಳಗಾವಿ ನಾಗರಿಕರಲ್ಲಿ ಭಯ ಹುಟ್ಟಿಸಿರುವ ಹಾಗೂ 10 ಸಾವಿರಕ್ಕೂ ಅಧಿಕ ಶಾಲಾ ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದಿರುವ ಗಾಲ್ಫ್ ಕ್ಲಬ್ ಮೈದಾನದಲ್ಲಿಯ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಚಿರೆತೆ ಹಿಡಿಯುವ ಪರಿಣಿತರ ತಂಡವನ್ನು ಬೆಳಗಾವಿಗೆ ಕಳಿಸುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯ ಹಿಂಡಲಗಾ ರಸ್ತೆಯಲ್ಲಿರುವ ಹನುಮಾನ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಹಸ್ರಾರು ನಾಗರಿಕರು ಕಳೆದ ಅಗಷ್ಟ್ 5ರಿಂದ ಚಿರತೆಯೊಂದರ ಭಯದ ನೆರಳಲ್ಲಿಯೇ ಬದುಕುತ್ತಿದ್ದಾರೆ.
ಸಮೀಪದ ಜಾಧವ ನಗರದಲ್ಲಿ ಅಗಸ್ಟ್ 5 ಮಧ್ಯಾಹ್ನ 12 ಗಂಟೆಗೆ ಕಟ್ಟಡ ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆಯನ್ನು ಹಿಡಿಯಲು ಇಂದಿನವರೆಗೂ ಸಾಧ್ಯವಾಗಿಲ್ಲ. ಕಳೆದ 21 ದಿನಗಳಲ್ಲಿ ಅದು ನಾಲ್ಕು ಬಾರಿ ಮೈದಾನದಿಂದ ಬಂದು ಹೊರಗೆ ಕಾಣಿಸಿಕೊಂಡಿದೆ.
ಈ ಚಿರತೆಯನ್ನು ಹಿಡಿಯಲು ಅರಣ್ಯ ಹಾಗೂ ಪೋಲೀಸ ಸಿಬ್ಬಂದಿ ನಡೆಸುತ್ತಿರುವ ಪ್ರಯತ್ನಗಳು ಯಶಸ್ವಿಯಾಗಿಲ್ಲ.ಹುಲಿ ಮತ್ತು ಚಿರತೆಯಂತಹ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಲ್ಲಿ ಹಾವಳಿ ನಡೆಸಿದಾಗ ಅರಣ್ಯ ಇಲಾಖೆ ಅನುಸರಿಬೇಕಾದ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟವಾದ ನಿಯಮಾವಳಿಗಳನ್ನು ರೂಪಿಸಿದೆ. 2013ರ ಜನೇವರಿ 30ರಂದು ಕೇಂದ್ರ ಪರಿಸರ ಹಾಗೂ ಇಲಾಖೆ ಅಡಿಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ರೂಪಿಸಿದ ನಿಯಮಾವಳಿಗಳ ಪ್ರಕಾರ ರಾಜ್ಯ ವನ್ಯಮೃಗಗಳ ಮುಖ್ಯ ವಾರ್ಡನ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಬೇಕಾಗುತ್ತದೆ. ಈ ಸಮಿತಿಯಲ್ಲಿ ಇತರ ಹಿರಿಯ ಅಧಿಕಾರಿಗಳ ಜೊತೆ ಪರಿಣಿತರು ಸಹ ಇರಬೇಕಾಗುತ್ತದೆ. ಜನವಸತಿ ಪ್ರದೇಶದಲ್ಲಿ ಹಾವಳಿ ನಡೆಸುವ ವನ್ಯ ಮೃಗಗಳನ್ನು ಹಿಡಿಯುವ ಜವಾಬ್ದಾರಿ ರಾಜ್ಯ ಮಟ್ಟದ ಅರಣ್ಯ ಇಲಾಖೆಯ ಮುಖ್ಯ ವಾರ್ಡನ್ ಮೇಲೆ ಇರುತ್ತದೆ.
ಆದರೆ ಬೆಳಗಾವಿಯಲ್ಲಿ ಕಳೆದ ಅಗಸ್ಟ್ 5ರಿಂದ ನಡೆದಿರುವ ಚಿರತೆ ಹಿಡಿಯುವ ಕಾರ್ಯಾಚರಣೆ ಸಮೀಪವೂ ಸಹ ರಾಜ್ಯ ಮುಖ್ಯ ವಾರ್ಡನ್ ಅವರು ಹಾಯ್ದಿಲ್ಲ. ಅಲ್ಲದೇ ಈಗ ನಡೆದಿರುವ ಕಾರ್ಯಾಚರಣೆಯಲ್ಲಿ ಈ ಮೊದಲು ಚಿರತೆ ಹಿಡಿದು ಅನುಭವ ಪಡೆದಿರುವ ಯಾರೂ ಇದ್ದಂತಿಲ್ಲ. ಹೀಗಾಗಿ ಕಳೆದ 21 ದಿನಗಳಿಂದ ಚಿರತೆ ಅಡಗಿಕೊಂಡು ಕುಳಿತಿರುವ ಪ್ರದೇಶದ ಸುತ್ತಮುತ್ತಲಿನ ನಾಗರಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುತ್ತಿದ್ದಾರೆ.