ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು ಭಾರತೀಯ ಜನತಾ ಪಕ್ಷದ ಯುಗವಾಗಿರಲಿದೆ. ಅಲ್ಲದೆ ಭಾರತವು ಈ ಸಮಯದಲ್ಲಿ ವಿಶ್ವಗುರುವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಟುಂಬದ ರಾಜಕೀಯ, ಜಾತಿವಾದ ಮತ್ತು ತುಷ್ಟೀಕರಣದ ರಾಜಕೀಯಗಳು “ಮಹಾನ್ ಪಾಪಗಳು” ಮತ್ತು ವರ್ಷಗಳಿಂದ ದೇಶವು ಅನುಭವಿಸುತ್ತಿರುವ ನೋವುಗಳ ಹಿಂದಿನ ಕಾರಣ ಎಂದು ಶಾ ಹೇಳಿದರು.
ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಕುಟುಂಬ ಆಡಳಿತವನ್ನು ಕೊನೆಗೊಳಿಸಲಿದೆ ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದರು.
ಬಿಜೆಪಿಯ ಮುಂದಿನ ಬೆಳವಣಿಗೆ ದಕ್ಷಿಣ ಭಾರತದಿಂದಲೇ ಆಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.