ಬೆಂಗಳೂರು ಹೆಸರಿಗೆ ಟೆಂಡರ್…! ಆದರೆ ಖರೀದಿಯೇ ಆಗಲ್ಲ. ರೈತರಿಗೆ ಹಣ ಪಾವತಿಯಾಗೋದು ಲೆಕ್ಕದಲ್ಲಷ್ಟೇ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿನ ಭ್ರಷ್ಟಾಚಾರದ ಪರಿಯಿದು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ರಾಗಿ, ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಉಚಿತವಾಗಿ ಗೋಣಿಚೀಲ (ಗನ್ನಿ ಬ್ಯಾಗ್) ವಿತರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ.
ರೈತರಿಗೆ ಚೀಲವನ್ನೂ ಕೊಡದೆ, ಹಣವನ್ನೂ ಕೊಡದೆ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಕೋಟಿಗಟ್ಟಲೆ ದುಡ್ಡನ್ನು ರೈತರ ಹೆಸರೇಳಿಕೊಂಡು ನಿಗಮದ ಅಧಿಕಾರಿಗಳೇ ಜೇಬಿಗಿಳಿಸಿದ್ದಾರೆ.
ಗೋಣಿಚೀಲ ಖರೀದಿ ಹಗರಣವನ್ನು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ 7 ನಿರ್ದೇಶಕರೇ ಬೆಳಕಿಗೆ ತಂದಿದ್ದಾರೆ. ಲಕ್ಷಾಂತರ ರೈತರ ಹೆಸರಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಕರು ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ. ಆದರೆ, ಸರ್ಕಾರ ಇದುವರೆಗೆ ಕ್ರಮ ಕೈಗೊಳ್ಳುವ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೊದಲಿಗೆ ಟೆಂಡರ್ನಲ್ಲಿ ಎಲ್1 (ಪ್ರಥಮ ಕಂಪನಿ) ಪಡೆದ ಕಂಪನಿಯಿಂದ ಕೇವಲ ಶೇ.2 ಗೋಣಿಚೀಲಗಳನ್ನಷ್ಟೇ ಸರಬರಾಜು ಮಾಡುವಂತೆ ನಿಗಮ ಕೋರಿತ್ತು. ರೈತರು ಕೇಳಿದರೆ ಮಾತ್ರ ಅವರಿಗೆ 22 ರೂ.ನಂತೆ ಹಣ ನೀಡುವಂತೆ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಚೀಲ ಖರೀದಿಸದಿದ್ದರೂ ಸರಬರಾಜುದಾರರಿಂದ ಒಂದು ಚೀಲಕ್ಕೆ ತಲಾ 5 ರೂ.ನಂತೆ 3 ಕೋಟಿ ರೂ. ಲಂಚ ಅಧಿಕಾರಿಗಳಿಗೆ ಹೋಗಿದೆ ಎಂಬ ಆರೋಪವಿದೆ. ಎಲ್ಲ ಸರಬರಾಜುದಾರರು ನಕಲಿ ದಾಖಲಾತಿಗಳನ್ನು ಸಲ್ಲಿಸಿ, ಟೆಂಡರ್ ಪಡೆದುಕೊಂಡಿದ್ದಾರೆ.
ಗೋಣಿಚೀಲ ಪೂರೈಸುವುದಾಗಿ ಟೆಂಡರ್ ಪಡೆದುಕೊಂಡ ಕಂಪನಿಗಳು ಗೋಣಿಚೀಲಗಳನ್ನು ಸರಬರಾಜು ಮಾಡಿಲ್ಲ. ಕೆಲ ಜಿಲ್ಲೆಗಳಲ್ಲಿ ಖರೀದಿ ಮುಗಿದ ನಂತರವೂ ಗೋಣಿಚೀಲಗಳು ಸರಬರಾಜು ಆಗಿಲ್ಲ. ರೈತರಿಗೆ ಹಣವಾಗಲಿ ಅಥವಾ ಚೀಲವಾಗಲಿ ತಲುಪಿಲ್ಲ. ಜಿಎಸ್ಟಿ ಕಾಯ್ದೆ ಅನ್ವಯ ಯಾವುದೇ ಸರಕು 50 ಸಾವಿರ ರೂ. ಮೇಲ್ಪಟ್ಟರೆ ಕಡ್ಡಾಯವಾಗಿ ಇ-ವೇ ಬಿಲ್ ಮುಖೇನ ಸರಬರಾಜು ಮಾಡಬೇಕು. ಆದರೆ, ಟೆಂಡರ್ನಲ್ಲಿ ಭಾಗವಹಿಸಿದ ಎಲ್ಲ ಸರಬರಾಜುದಾರರು ಇ-ವೇ ಬಿಲ್ ಸಲ್ಲಿಸಿಲ್ಲ. ಸರಬರಾಜುದಾರರು ಕೇವಲ ಒಂದು ಬಿಳಿ ಹಾಳೆಯ ಮೇಲೆ ಕೋಟ್ಯಂತರ ರೂ. ಬಿಲ್ ನೀಡಿದ್ದಾರೆ. ನಿಗಮದ ಮುಖ್ಯಸ್ಥರು, ಸಮಿತಿ ರಚಿಸದೆ ಖುದ್ದು ಹಣ ಬಿಡುಗಡೆ ಮಾಡಿದ್ದಾರೆ ಎಂದು ನಿಗಮದ ನಿರ್ದೇಶಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.