ರಾಮನಗರ ಜಿಲ್ಲೆಯ ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆ ವಿಚಾರ ತಾಲೂಕಿನಲ್ಲಿ ಉಭಯ ನಾಯಕರ ಕದನ ಮತ್ತೆ ಮುನ್ನಲೆಗೆ ಬಂದಿದೆ. ಕಾರಣವಾಗಿದ್ದು, ಈ ವಿಚಾರದಲ್ಲಿ ತಹಸೀಲ್ದಾರ್ಗಳು ನೆಪಮಾತ್ರವಾದರೂ ಎಚ್ಡಿಕೆ ಮತ್ತು ಸಿಪಿವೈ ನಡುವಿನ ಜಂಗೀಕುಸ್ತಿಗೆ ವೇದಿಕೆಯಾಗಿ ಪರಿಣಮಿಸಿದೆ.
ಶುಕ್ರವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಿಪಿವೈ ಕೈ ಮೇಲಾಗಿದ್ದು, ಈ ಹಿಂದಿನ ಬೆಳವಣಿಗೆಗಳನ್ನು ಗಮನಿಸಿದರೆ ನಾಳೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ಇದೆ.
ಚನ್ನಪಟ್ಟಣ ತಹಸೀಲ್ದಾರ್ ಎಲ್.ನಾಗೇಶ್ ಕೊನೆಗೂ ವರ್ಗಾವಣೆಗೊಂಡಿದ್ದಾರೆ. ಈ ಸ್ಥಾನಕ್ಕೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಕೆ.ಸುದರ್ಶನ್ ನಿಯೋಜನೆಗೊಂಡಿದ್ದಾರೆ. ಕಂದಾಯ ಇಲಾಖೆ ಕಾರ್ಯದರ್ಶಿ ಜಿ.ಎನ್.ಸುಶೀಲ ಶುಕ್ರವಾರ ಈ ಆದೇಶ ಹೊರಡಿಸಿದ್ದು, ತಕ್ಷಣ ಜಾರಿಗೆ ಬರುವಂತೆ ಸುದರ್ಶನ್ ಅವರನ್ನು ತಹಸೀಲ್ದಾರ್ ಆಗಿ ನಿಯೋಜನೆಗೊಳ್ಳುವಂತೆ ಹಾಗೂ ನಾಗೇಶ್ ಅವರನ್ನು ತಕ್ಷಣ ಸರ್ಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ರಾಜಕೀಯ ಜಂಗೀಕುಸ್ತಿ: ತಹಸೀಲ್ದಾರ್ ವರ್ಗಾವಣೆ ವಿಚಾರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಎಲ್.ನಾಗೇಶ್ ಪರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸುದರ್ಶನ್ ಪರವಾಗಿ ಸಿ.ಪಿ.ಯೋಗೇಶ್ವರ್ ಲಾಬಿ ನಡೆಸುವ ಮೂಲಕ ಈ ಹುದ್ದೆಯನ್ನು ತಮ್ಮ ಕಡೆಯವರೇ ಅಲಂಕರಿಸಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲೇ ಇದ್ದ ತಹಸೀಲ್ದಾರ್ ನಾಗೇಶ್ ಕೊನೆಗೂ ವರ್ಗಾವಣೆಗೊಂಡಿದ್ದು, ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಯೋಗೇಶ್ವರ್ ಕೈ ಮೇಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.