ಬೆಂಗಳೂರು: ಸಂಘಟನೆ ಬಲಿಷ್ಠವಾಗಿದೆ ಎಂದು ಆಡಳಿತರೂಢ ಬಿಜೆಪಿ ವಿರಮಿಸದೆ, ಪರಿಶ್ರಮ ಹಾಗೂ ಕ್ರಿಯಾಶೀಲತೆ ಕಾಯ್ದಿಟ್ಟುಕೊಳ್ಳಲೆಂದು ಸಂಘಟನೆ ಬಲರ್ವಧನೆ ಪ್ರವಾಸವನ್ನು ಮಂಗಳವಾರ ಆರಂಭಿಸಲಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಸಿ.ಟಿ.ರವಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಮೂರು ಪ್ರತ್ಯೇಕ ತಂಡಗಳು ಸಜ್ಜಾಗಿವೆ.
ಮೂರೂ ತಂಡಗಳು ವಿಭಾಗವಾರು ಸಭೆಗಳಿಗೆ ತಲಾ ಎರಡು ದಿನ ಮೀಸಲಿಟ್ಟಿವೆ. ಏ.24ರವರೆಗೆ ರಾಜ್ಯ ನಾಯಕರು ಸಂಚಾರ ಕೈಗೊಳ್ಳಲಿದ್ದು, ತಳಸ್ತರದ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ನಿಕಟತೆ ಗಟ್ಟಿಗೊಳಿಸಲು ಮುಂದಾಗಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಪ್ರಚಾರಕ್ಕೆ ಹೊಳಪು ಮತ್ತು ಎಲ್ಲ ಹಂತದ ಕಾರ್ಯಕರ್ತರಲ್ಲಿ ಹುರುಪು ತುಂಬಲೆಂದು ರಾಜ್ಯ ನಾಯಕರು ಹೊರಟಿದ್ದಾರೆ. ಜಿಲ್ಲಾ, ಮಂಡಲಮಟ್ಟದ ಪದಾಧಿಕಾರಿಗಳ ಜತೆಗೆ ಪೂರ್ವಭಾವಿ ಸಭೆ, ಚರ್ಚೆ ನಡೆಸಿದ್ದು, ಬೇಸಿಗೆಯ ಪ್ರಖರ ಬಿಸಿಲು ನಡುವೆ ವಿಭಾಗವಾರು ಸಂಘಟನಾ ಸಭೆಗಳಿಗೆ ಭೂಮಿಕೆ ಸಿದ್ಧವಾಗಿದೆ. ಹೊಸಪೇಟೆಯಲ್ಲಿ ಏ.16, 17ರಂದು ನಡೆಯಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ 2ನೇ ಹಂತದ ಪ್ರವಾಸ ನೀಲಿನಕ್ಷೆ ಅಂತಿಮಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜ್ಯ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ ನೀಡುತ್ತಿದೆ. ವಿದ್ಯುತ್ ಮತ್ತು ಸಾರಿಗೆ ಕ್ಷೇತ್ರ ಸ್ವಂತ ಬಲದಲ್ಲಿ ಮುನ್ನಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ. ಸಾರಿಗೆ ಕ್ಷೇತ್ರ ಉನ್ನತೀಕರಣ ನಿಟ್ಟಿನಲ್ಲಿ ನಿವೃತ್ತ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿ ಮುಂದಿನ ಕ್ರಮಕೈಗೊಳಲಾಗುವುದು.