ಬೆಂಗಳೂರು: ರಾಜ್ಯದ ಅನೇಕ ಕಡೆ ಬಿಜೆಪಿ ಶಾಸಕರು ನಟ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಪ್ರದರ್ಶನ ನಿಲ್ಲಿಸಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂಬ ದೂರುಗಳಿವೆ. ಸರ್ಕಾರ ಕೂಡಲೇ ಈ ದೌರ್ಜನ್ಯಕ್ಕೆ ತಡೆ ಹಾಕಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸೋಮವಾರ ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಅವರು ನನ್ನನ್ನು ಭೇಟಿಯಾಗಿ, ಅನೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಜೇಮ್ಸ್ ಚಿತ್ರ ಪ್ರದರ್ಶನ ನಡೆಯುತ್ತಿರುವ ಸಿನಿಮಾ ಮಂದಿರಕ್ಕೆ ಹೋಗಿ ಜೇಮ್ಸ್ ಪ್ರದರ್ಶನ ನಿಲ್ಲಿಸಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹಾಕಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ನೋವು ತೋಡಿಕೊಂಡರು. ಆಸಕ್ತಿ ಇದ್ದವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲಿ, ನಮ್ಮದೇನು ವಿರೋಧ ಇಲ್ಲ. ಆದರೆ ಒಂದು ಸಿನಿಮಾ ಸ್ಥಗಿತಗೊಳಿಸಿ ಇನ್ನೊಂದು ಚಿತ್ರ ನೋಡಿ ಎಂದು ಜನರ ಮೇಲೆ ಒತ್ತಡ ಹಾಕೋದು ಸರಿಯಲ್ಲ. ಜೇಮ್ಸ್ ಸಿನಿಮಾ ಪುನೀತ್ ಅವರ ಕೊನೇ ಸಿನಿಮಾ. ಇದಕ್ಕೂ ಕೂಡ ತೆರಿಗೆ ವಿನಾಯಿತಿ ನೀಡಬೇಕಿತ್ತು. ಇನ್ನಾದರೂ ಚಿತ್ರದ ಮೇಲೆ ತೆರಿಗೆ ರದ್ದು ಮಾಡಿ ಇನ್ನೂ ಹೆಚ್ಚು ಜನರಿಗೆ ನೋಡಲು ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಅನೇಕ ಚಿತ್ರಮಂದಿರಗಳ ಮಾಲೀಕರು ನನಗೆ ಫೋನ್ ಮಾಡಿ ಹೇಳಿದ್ದಾರೆ. ಜೇಮ್ಸ್ ಚಿತ್ರ ತೆಗೆದು ಕಾಶ್ಮೀರ್ ಫೈಲ್ಸ್ ಹಾಕುವಂತೆ ಬಿಜೆಪಿ ಶಾಸಕರು ಮತ್ತು ಮಂತ್ರಿಗಳು ಒತ್ತಡ ಹಾಕುತ್ತಿದ್ದಾರಂತೆ. ಪುನೀತ್ ರಾಜ್ಕುಮಾರ್ ಕೊನೆಯ ಚಿತ್ರಕ್ಕೆ ತೊಂದರೆ ಕೊಡುವುದು ಸರಿಯಲ್ಲ. ದೇಶಕಂಡ ಮಹಾನ್ ಕಲಾವಿದ ಪುನೀತ್ ರಾಜ್ಕುಮಾರ್. ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಿಯಾಯಿತಿ ಕೊಡುವದಕ್ಕೇನಿದೆ? ಗಾಂಧಿ ಹತ್ಯೆಗಿಂತ ದೊಡ್ಡ ಚಿತ್ರಬೇಕಾ? ಈ ಚಿತ್ರದ ಮೂಲಕ ಕಾಂಗ್ರೆಸ್ನವರು ಕೆಟ್ಟವರು ಅಂತ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.