ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯೋರ್ವ ನೇತ್ರಾವತಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ.
ಗೇರುಕಟ್ಟೆ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಗೇರುಕಟ್ಟೆಯಿಂದ ಉಪ್ಪಿನಂಗಡಿಗೆ ಕೆಎಸ್ಆರ್ಟಿಸಿ ಬಸ್ಸ್ನಲ್ಲಿ ಬಂದಿದ್ದ ಮುತ್ತಪ್ಪ ಶೆಟ್ಟಿ, ಸೇತುವೆ ಬಳಿ ಬಂದು ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ.
ಕಾರಿನಲ್ಲಿ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಸಯಾದ್, ಹಮ್ಜ, ರಶೀದ್ ಎಂಬ ಸ್ಥಳೀಯರು ವ್ಯಕ್ತಿಯೊಬ್ಬ ನದಿಗೆ ಹಾರಿದನ್ನು ಕಂಡು ಕೂಡಲೇ ಕಾರು ನಿಲ್ಲಿಸಿ ರಕ್ಷಣೆ ಮಾಡಲು ತಾವು ನದಿಗೆ ಹಾರಿದ್ದಾರೆ. ಬಳಿಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮುತ್ತಪ್ಪ ಶೆಟ್ಟಿ ಸಾವನ್ನಪ್ಪಿದ್ದರು. ಮೃತರು ಆತ್ಮಹತ್ಯೆಗೆ ಶರಣಾಗಿದ್ದೇಕೆ ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7