Breaking News

ಜಮೀರ್ ಮೇಲೆ ಇಡಿ ದಾಳಿ ಮಾಡಿಸಿದ್ಯಾರು? ಮತ್ಯಾಕೇ?

Spread the love

ಐಎಂಎ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಮೀರ್ ಅಹ್ಮದ್ ಅವರಿಗೆ ಸೇರಿದ್ದ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ನಿವಾಸ, ಸದಾಶಿವ ನಗರದ ಫ್ಲಾಟ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಸತತ 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಆದರೀಗ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಸದಾ ಹೇಳಿಕೆ ನೀಡುತ್ತಿರುವುದೇ ಜಮೀರ್ ಇಡಿ ದಾಳಿಗೆ ಕಾರಣ ಎನ್ನಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ಸಂಚು ರೂಪಿಸಿದ್ದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ಲಾನ್ ಮಾಡಿ ಜಮೀರ್ ಖೆಡ್ಡಾ ತೋಡಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬ ಚರ್ಚೆ ಜೋರಾಗಿಯೇ ನಡೆಯಿತು. ಕಾಂಗ್ರೆಸ್ ಶಾಸಕ ಜಮೀರ್ ಅಂತೂ ಸಿದ್ದರಾಮಯ್ಯನವರೇ ರಾಜ್ಯದ ಮುಂದಿನ ಸಿಎಂ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಭಾರೀ ಅವಮಾನವಾಗಿತ್ತು. ಇದೇ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟವೂ ನಡೆದಿತ್ತು.

ಒಂದೆಡೆ ಮುಂದಿನ ಸಿಎಂ ಡಿ.ಕೆ ಶಿವಕುಮಾರ್ ಎನ್ನುತ್ತಿದ್ದರೆ, ಇನ್ನೊಂದೆಡೆ ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿ ಎಂದು ಅಭಿಮಾನಿಗಳು ಬಹಿರಂಗವಾಗಿಯೇ ಘೋಷಣೆ ಕೂಗ ತೊಡಗಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜಗಳವೂ ಕಾಂಗ್ರೆಸ್ ಹೈಕಮಾಂಡ್ ಕಿವಿಗೂ ಬಿತ್ತು. ಇಬ್ಬರು ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದ ಕಾಂಗ್ರೆಸ್ ಹೈಕಮಾಂಡ್, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿ. ಒಗ್ಗಟ್ಟಿನಿಂದ ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿ. ವೈಯಕ್ತಿಕ ಜಗಳನ್ನು ಬಿಡಿ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ಗೆ ಕಿವಿಮಾತು ಹೇಳಿತು.

ಹೀಗಿದ್ದರೂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಸುಮ್ಮನಿದ್ದರೂ ಜಮೀರ್ ಮಾತ್ರ ಸೈಲೆಂಟ್ ಆಗಲಿಲ್ಲ. ಬದಲಿಗೆ ಸಿದ್ದರಾಮಯ್ಯ ನಮ್ಮ ಮುಂದಿನ ಸಿಎಂ, ಇವರು ಬಯಸಿದ್ರೆ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದು ಹೇಳಿದರು. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯರನ್ನು 50 ಸಾವಿರ ವೋಟುಗಳ ಅಂತರದಿಂದ ಗೆಲ್ಲಿಸೋ ಜವಾಬ್ದಾರಿ ನನ್ನದು ಎಂದು ಹೇಳುತ್ತಿದ್ದರು. ಸಿದ್ದರಾಮಯ್ಯ ಕಾರಣಕ್ಕೆ ಡಿ.ಕೆ ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಬಿಜೆಪಿ ಹಲವು ನಾಯಕರ ವಿರೋಧ ಕಟ್ಟಿಕೊಂಡರು.

ಈಗ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿದ್ದೇ ಜಮೀರ್ಗೆ ಮುಳುವಾಯ್ತ ಎಂಬ ಅನುಮಾನ ಹುಟ್ಟಿಕೊಂಡಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನ ಸಿದ್ದರಾಮಯ್ಯ ವಿರೋಧಿಗಳ ಬಣ ಜಮೀರ್ ಅವರನ್ನು ಟಾರ್ಗೆಟ್ ಮಾಡಿದೆ ಎನ್ನಲಾಗಿದೆ. ಹೇಗಾದರೂ ಸರಿ ಜಮೀರ್ ಬಾಯಿಗೆ ಬೀಗ ಹಾಕಲು ಹೀಗೆ ಇಡಿ ಅಧಿಕಾರಿಗಳ ಮೂಲಕ ರೈಡ್ ಮಾಡಿಸಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ. ಹೀಗಾಗಿ ಕಾಂಗ್ರೆಸ್ ಒಂದು ವೇಳೆ ಗೆದ್ದರೆ, ಸಿದ್ದರಾಮಯ್ಯನವರೇ ಸಿಎಂ ಆಗೋದು ಪಕ್ಕಾ. ಸಿದ್ದರಾಮಯ್ಯ ಸಿಎಂ ಆದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯೊಳಗಿನ ಕೆಲವರ ರಾಜಕೀಯ ಬೇಳೆ ಬೇಯೋದಿಲ್ಲ. ಬಹಿರಂಗವಾಗಿ ಮೂರು ಪಕ್ಷಗಳಲ್ಲಿನ ದೋಸ್ತಿಗಳು ಒಂದೆಡೆ ಸೇರಿ ರಾಜಕೀಯ ಮಾಡಲು ಆಗೋದಿಲ್ಲ. ಹಾಗಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತ ಎಲ್ಲರನ್ನು ರಾಜಕೀಯವಾಗಿ ಮಗಿಸಬೇಕು ಎಂದು ಈ ಇಡಿ ದಾಳಿ ನಡೆಸಿದ್ದರಂತೆ.

ಜಮೀರ್ ಮುಸ್ಲಿಂ ಸಮುದಾಯದ ಪ್ರಬಲ ನಾಯಕ, ಸಿದ್ದರಾಮಯ್ಯ ಪರಮ ಆಪ್ತ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಗೆಲ್ಲಿಸಬೇಕು ಎಂದು ಜಮೀರ್ ಈಗಿನಿಂದಲೇ ಪ್ಲಾನ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ವಿರೋಧಿಗಳು ಗೊತ್ತಿಲ್ಲದಂತೆಯೇ ಚುನಾವಣೆ ಗೆಲ್ಲಲು ತಯಾರಿ ನಡೆಸಿಕೊಂಡಿದ್ದಾರೆ. ಇದರ ರೂವಾರಿ ಜಮೀರ್ ಎಂಬುದು ಸ್ಪಷ್ಟ. ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲವಾಗಿರುವ ಜಮೀರ್ ಸಿದ್ದರಾಮಯ್ಯ ಗೆಲ್ಲಿಸಲು ಬೇಕಾದ ಎಲ್ಲಾ ರೀತಿಯ ಪ್ಲಾನ್ ಮಾಡಿಕೊಂಡಿರಬಹುದು. ಸಿದ್ದರಾಮಯ್ಯ ಸೋಲಿಸಲು ಜಮೀರ್ ಅನ್ನು ಟಾರ್ಗೆಟ್ ಮಾಡಬೇಕು ಎಂಬುದು ಹಲವರ ಪ್ಲಾನ್.

ಸಿದ್ದರಾಮಯ್ಯ ಸಿಎಂ ಆದರೆ, ಜಮೀರ್ಗೆ ಒಳ್ಳೆಯ ಖಾತೆ ಸಿಗಲಿದೆ. ರಾಜ್ಯದ ಎಲ್ಲೆಡೆಯೂ ಜಮೀರ್ ಅವರದ್ದೇ ಪಾರುಪತ್ಯ ಇರಲಿದೆ. ಜಮೀರ್ ಬೆಳೆದಷ್ಟು ಮುಸ್ಲೀಂ ಸಮುದಾಯದ ಮತಗಳು ನಮ್ಮ ಕೈ ತಪ್ಪಲಿವೆ. ಆದ್ದರಿಂದ ಜಮೀರ್ ಅವ್ಯವಹಾರಗಳನ್ನು ಬಯಲಿಗೆ ಎಳೆದು ಜೈಲಿಗೆ ಕಳಿಸಬೇಕು ಎಂದು ಕೆಲವು ಮುಸ್ಲಿಂ ಸಮುದಾಯದ ನಾಯಕರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ನಲ್ಲಿ ದಲಿತರು, ಮುಸ್ಲಿಮರು ಮತ್ತು ಹಿಂದುಳಿದ ವರ್ಗದ ನಾಯಕರನ್ನು ಮುಗಿಸಲು ಅಗ್ರಗಣ್ಯ ಜಾತಿಯ ನಾಯಕರು ಅಗತ್ಯ ತಯಾರಿ ನಡೆಸಿಕೊಂಡಿದ್ದಾರೆ ಎಂಬುದು ಮಾತ್ರ ವಾಸ್ತವ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ