ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆಯ ಚುನಾವಣೆಗೆ “ಉಪಾಂತ್ಯ’ ಎಂದೇ ಪರಿಗಣಿಸಲಾಗಿದ್ದ ತಾ.ಪಂ.- ಜಿ.ಪಂ. ಚುನಾ ವಣೆ ಗಳು 2023ರ ಮೇ ಒಳಗೆ ನಡೆಯವುದಕ್ಕೆ ಸಾಧ್ಯವೇ ಇಲ್ಲ. ರಾಜ್ಯ ಸರಕಾರದಲ್ಲಿನ ಈಗಿನ ಬೆಳ ವಣಿಗೆಗಳನ್ನು ಗಮನಿಸಿದರೆ ವಿಧಾನಸಭೆ ಚುನಾವಣೆ ಬಳಿಕವಷ್ಟೇ ತಾ.ಪಂ.
ಮತ್ತು ಜಿ.ಪಂ. ಚುನಾವಣೆಗಳು ನಡೆಯಲಿವೆ.
ಒಂದು ಕಡೆ ಕ್ಷೇತ್ರಗಳ ಗಡಿ ನಿಗದಿಗೆ ಸೀಮಾ ನಿರ್ಣಯ ಆಯೋಗ ಇನ್ನೂ ಮೂರು ತಿಂಗಳು ಕಾಲಾವಕಾಶ ಕೇಳಿದೆ. ಇನ್ನೊಂದಡೆ ಕ್ಷೇತ್ರಗಳು ನಿಗದಿಯಾದ ಅನಂತರ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರಕಾರ ಮೂರು ತಿಂಗಳು ಮಿತಿ ಹಾಕಿಕೊಂಡಿದೆ.
ಈ ರೀತಿ ಇನ್ನೂ ಆರು ತಿಂಗಳು ಅಂದರೆ 2023ರ ಮಾರ್ಚ್ ತನಕ ಕ್ಷೇತ್ರಗಳ ನಿಗದಿ, ಮೀಸಲಾತಿ ಪ್ರಕ್ರಿಯೆ ನಡೆಯುತ್ತದೆ.
ಕ್ಷೇತ್ರಗಳ ಗಡಿ ನಿಗದಿಯಾಗಿ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಪಟ್ಟಿ ಸಿದ್ಧಪಡಿಸಿಕೊಳ್ಳಲು ರಾಜ್ಯ ಚುನಾವಣ ಆಯೋಗಕ್ಕೆ ಕನಿಷ್ಠ ಒಂದು ತಿಂಗಳು ಬೇಕು. ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಚುನಾವಣ ವೇಳಾ ಪಟ್ಟಿ ಹೊರಡಿಸಲು ಒಂದೂವರೆ ತಿಂಗಳು ಬೇಕಾಗುತ್ತದೆ. ಕನಿಷ್ಠ ಎರಡು ಹಂತಗಳಲ್ಲಿ ಚುನಾವಣೆ ನಡೆಸಿದರೂ ಅದಕ್ಕೂ ಕನಿಷ್ಠ 1 ತಿಂಗಳು ಬೇಕಾಗುತ್ತದೆ. ಈ ಮಧ್ಯೆ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದರೆ ತಾ.ಪಂ., ಜಿ.ಪಂ. ಚುನಾವಣ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುತ್ತದೆ.