ಖಾನಾಪುರ: ಇತ್ತೀಚೆಗೆ ನಡೆದ ಹುಲಿಗಳ ಗಣತಿಯಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ವೃದ್ದಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ನೆರೆಯ ದಾಂಡೇಲಿ ಅರಣ್ಯ ಮತ್ತು ಕಾಳಿ ಹುಲಿ ಮೀಸಲು ಅರಣ್ಯ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲೂ ಹುಲಿಗಳ ಸಂತತಿಯಲ್ಲಿ ಹೆಚ್ಚಳವಾಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ.
ಮುಂದಿನ ವರ್ಷಗಳಲ್ಲಿ ಹುಲಿಗಳ ಸಂರಕ್ಷಣೆಗಾಗಿ ಈ ಅರಣ್ಯ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪದಿಂದ ದೂರ ಇಡಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ತಾಲ್ಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯ ಕೃಷ್ಣಾಪುರ ಗ್ರಾಮಕ್ಕೆ ಭಾನುವಾರ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ದಟ್ಟ ಅರಣ್ಯದ ನಡುವೆ ಇರುವ ಕೃಷ್ಣಾಪುರ ಗ್ರಾಮವನ್ನು ಬೇರೆಡೆ ಸ್ಥಳಾಂತರಿಸುವ ಕುರಿತು ಗ್ರಾಮಸ್ಥರ ಜೊತೆ ಚರ್ಚಿಸಿದರು.
ಬಳಿಕ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ, ಹುಲಿಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ನಿಲುವು ತಳೆಯುವ ಸಾಧ್ಯತೆಯಿದೆ. ಕೃಷ್ಣಾಪುರ ಗ್ರಾಮದ ಸುತ್ತಮುತ್ತ ಹುಲಿಗಳು ಸಂಚರಿಸುತ್ತಿರುವುದನ್ನು ಅರಣ್ಯ ಇಲಾಖೆಯ ದಾಖಲೆಗಳು ಖಚಿತಪಡಿಸುತ್ತಿವೆ. ಈಗ ಭೀಮಗಡ ವನ್ಯಧಾಮ ವಾಸಿಗಳಿಗೆ ರಾಜ್ಯ ಸರ್ಕಾರ ಅರಣ್ಯ ಇಲಾಖೆಯ ಮೂಲಕ ವಿಶೇಷ ಪ್ಯಾಕೇಜ್ ಘೋಷಿಸಿದೆ. ಕೃಷ್ಣಾಪುರದ ಜನರು ಈಗ ಇದನ್ನು ಪಡೆದು ಅರಣ್ಯ ಪ್ರದೇಶದಿಂದ ಮುಖ್ಯವಾಹಿನಿಗೆ ಬರಬೇಕು ಎಂಬುದು ಇಲಾಖೆಯ ಆಶಯ ಎಂದರು.
ವಿಶೇಷ ಪ್ಯಾಕೇಜ್ ಜೊತೆಗೆ ಗ್ರಾಮಸ್ಥರ ಇತರೆ ಯಾವುದೇ ಬೇಡಿಕೆಗಳಿದ್ದರೂ ಮಾತುಕತೆ ಮೂಲಕ ಅವುಗಳನ್ನು ಈಡೇರಿಸಲು ಜಿಲ್ಲಾಡಳಿತ ಪ್ರಯತ್ನಿಸಲಿದೆ. ಆದರೆ ಸ್ಥಳಾಂತರ ವಿಚಾರದಲ್ಲಿ ಸ್ಥಳೀಯ ಜನರಿಗೆ ಸರ್ಕಾರದಿಂದ ಯಾವುದೇ ರೀತಿಯ ಬಲವಂತ ಅಥವಾ ಒತ್ತಾಯ ಮಾಡುವುದಿಲ್ಲ. ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಸ್ಥಳಾಂತರಕ್ಕೆ ಒಪ್ಪಿದರೆ ಅವರಿಗೆ ಅರಣ್ಯ ಇಲಾಖೆ ಘೋಷಿಸಿದ ಶಾಶ್ವತ ಪರಿಹಾರ ನೀಡುವುದರ ಜೊತೆಗೆ ಗ್ರಾಮದ ಜನರು ಬಯಸುವ ಇತರೆ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಯಾಗಿ ತಾವು ಬದ್ಧ. ಈ ವಿಚಾರದ ಬಗ್ಗೆ ಚರ್ಚಿಸಲು ಗ್ರಾಮಸ್ಥರು ಕರೆದರೆ ತಾವು ಕೃಷ್ಣಾಪುರಕ್ಕೆ ಬರಲು ಸಿದ್ಧ ಎಂದು ವಿವರಿಸಿದರು.
ವಲಯ ಅರಣ್ಯಾಧಿಕಾರಿ ಸಯ್ಯದ ನದಾಫ ಮಾತನಾಡಿ, ಸ್ಥಳಾಂತರದ ನಿಯಮಗಳು, ರೂಪುರೇಷೆಗಳು, ಪರಿಹಾರದ ವಿಧಾನ, ಸಲ್ಲಿಸಬೇಕಾದ ದಾಖಲೆಗಳು ಸೇರಿದಂತೆ ಸ್ಥಳಾಂತರದ ಪ್ರಕ್ರಿಯೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಕೃಷ್ಣಾಪುರ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
Laxmi News 24×7