ಖಾನಾಪುರ: ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸರ್ಕಾರದ ಆದೇಶವಿದ್ದರೂ ಕಳೆದ 8 ತಿಂಗಳಿಂದ ಪ್ರತಿ ತಿಂಗಳು ದಲಿತರ ದಿನವನ್ನು ಆಚರಿಸದೇ ದಲಿತ ಸಮುದಾಯದವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ದಲಿತರ ಸಭೆ ಆಯೋಜಿಸದೇ ಮೇಲಧಿಕಾರಿಗಳಿಗೆ ಸಭೆ ನಡೆಸಿರುವ ಬಗ್ಗೆ ಖೊಟ್ಟಿ ನಡಾವಳಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂತೋಷ ತಳವಾರ ದೂರು ನೀಡಿದ್ದಾರೆ.
ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ದಲಿತರ ಸಭೆಯನ್ನು ಪ್ರತಿ ತಿಂಗಳ 2ನೇ ಭಾನುವಾರ ಸಭೆ ನಡೆಸಬೇಕು ಎಂದು ಆದೇಶವಿದ್ದರೂ ನಂದಗಡ ಠಾಣೆಯಲ್ಲಿ ಸಭೆ ನಡೆಸಿಲ್ಲ. ಈ ವಿಷಯದ ಮಾಹಿತಿ ಪಡೆಯಲು ತಾವು ಜ.12ರಂದು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಮಾಹಿತಿ ನೀಡಲು ಠಾಣಾಧಿಕಾರಿಗಳು ನಿರಾಕರಿಸಿದ್ದಾರೆ.
ಹೀಗಾಗಿ ಠಾಣೆಯಲ್ಲಿ ದಲಿತರ ಸಭೆ ನಡೆಸಿರುವ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದ್ದು, ಮನವಿ ಸಲ್ಲಿಸಿದ ಎರಡು ತಿಂಗಳಾದರೂ ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡಿಲ್ಲ. ಮಾಹಿತಿ ಹಕ್ಕು ಮೇಲ್ಮನವಿ ಪ್ರಾಧಿಕಾರಿಯಾದ ನಂದಗಡ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಮೇಲ್ಮನವಿ ಸಲ್ಲಿಸಿದರೂ ಅವರಿಂದಲೂ ತಮಗೆ ಮಾಹಿತಿ ಸಿಕ್ಕಿಲ್ಲ. ಮಾಹಿತಿ ಹಕ್ಕಿನಡಿ ಮಾಹಿತಿ ನೀಡದ ಮತ್ತು ದಲಿತರ ಸಭೆ ಆಯೋಜನೆ ಬಗ್ಗೆ ಕ್ರಮ ಕೈಗೊಳ್ಳದ ನಂದಗಡ ಠಾಣೆಯ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಭೆ ಮಾಡಿರುವುದಾಗಿ ನಡಾವಳಿ ಸಿದ್ಧಪಡಿಸಲಾಗಿದೆ. ಹೀಗಾಗಿ ನಾನು ಠಾಣೆಗೆ ಭೇಟಿ ನೀಡಿ ಕಳೆದ 6 ತಿಂಗಳಿಂದ ಠಾಣೆಯಲ್ಲಿ ಸಭೆ ನಡೆದ ಬಗ್ಗೆ ದಾಖಲೆಗಳು, ಸಭೆಯಲ್ಲಿ ಭಾಗವಹಿಸಿರುವ ಮುಖಂಡರ ವಿವರ, ಚರ್ಚಿಸಿದ ವಿಷಯದ ಬಗ್ಗೆ ಮಾಹಿತಿ ನೀಡಲು ಕೋರಿದ್ದು, ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದರಿಂದ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದೇನೆ. ಅಲ್ಲಿಂದ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
Laxmi News 24×7