Breaking News

ಬಿಜೆಪಿ ಪೌರೋಹಿತ್ಯದಲ್ಲಿ ಶಶಿಕಲಾ-ಅಣ್ಣಾಡಿಎಂಕೆ ವಿಲೀನ?

Spread the love

ಚೆನ್ನೈ : ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಗೆಳತಿ ವಿ.ಕೆ. ಶಶಿಕಲಾ ಅವರು ಬೆಂಗಳೂರು ಜೈಲಿನಿಂದ 2021ರ ಜನವರಿಯಲ್ಲಿ ಬಿಡುಗಡೆ ಆಗುವುದು ಖಚಿತವಾಗುತ್ತಿದ್ದಂತೆಯೇ, ರಾಜ್ಯ ರಾಜಕೀಯದಲ್ಲಿ ಹೊಸ ಚಟುವಟಿಕೆಗಳು ಗರಿಗೆದರಿವೆ. ಅಣ್ಣಾ ಡಿಎಂಕೆ ಪಕ್ಷ ಹಾಗೂ ಅಣ್ಣಾ ಡಿಎಂಕೆ ತೊರೆದಿದ್ದ ಶಶಿಕಲಾ ಅವರ ನಡುವೆ ಸಂಧಾನಕ್ಕೆ ಬಿಜೆಪಿ ಯತ್ನಿಸುತ್ತಿದ್ದು, ಉಭಯ ಬಣಗಳ ವಿಲೀನಕ್ಕೆ ಪ್ರಕ್ರಿಯೆಗೆ ಕೈಹಾಕಿದೆ.

ಅಣ್ಣಾ ಡಿಎಂಕೆಯಿಂದ ಹೊರಬಂದು ಎಂಎಂಎಂಕೆ ಪಕ್ಷ ಸ್ಥಾಪಿಸಿರುವ ಶಶಿಕಲಾ ಬಂಧು ಟಿಟಿವಿ ದಿನಕರನ್‌ ಅವರನ್ನು ಇತ್ತೀಚೆಗೆ ಬಿಜೆಪಿ ಮುಖಂಡರು ದಿಲ್ಲಿಗೆ ಕರೆಸಿಕೊಂಡಿದ್ದರು. ಈ ವೇಳೆ ವಿಲೀನದ ಆಫರ್‌ ಇರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಮಿಳುನಾಡಿನಲ್ಲಿ ಡಿಎಂಕೆ ಪ್ರಬಲವಾಗತೊಡಗಿದೆ. ಹೀಗಾದರೆ ಬಿಜೆಪಿಗೆ ತಮಿಳು ನೆಲದಲ್ಲಿ ಬೇರೂರುವುದು ಕಷ್ಟ.

ಹೀಗಾಗಿ ಅಣ್ಣಾ ಡಿಎಂಕೆಯ ಉಭಯ ಬಣ ಒಗ್ಗೂಡಿಸಿದರೆ ಮುಂದಿನ ಚುನಾವಣೆಯಲ್ಲಿ ಈ ಪಕ್ಷ ಹ್ಯಾಟ್ರಿಕ್‌ ಜಯ ಸಾಧಿಸುವ ಅವಕಾಶ ಲಭಿಸಲಿದೆ. ತನಗೂ ಬೇರೂರಲು ನೆರವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಸಂಧಾನ ಸೂತ್ರ:

ಪ್ರಸ್ತಾವಿತ ಸಂಧಾನ ಸೂತ್ರದ ಪ್ರಕಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕ್ರಮವಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಒ. ಪನ್ನೀರಸೆಲ್ವಂ ಅವರೇ ಮುಂದುವರಿಯಲಿದ್ದಾರೆ. ಪಕ್ಷ ಸಂಘಟನೆ ಹೊಣೆ ಶಶಿಕಲಾ-ದಿನಕರನ್‌ಗೆ ಲಭಿಸಲಿದೆ.

ಆದರೆ ಶಶಿಕಲಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮಾಡಬೇಕು. ತಮಗೂ ಉನ್ನತ ಸ್ಥಾನ ನೀಡಬೇಕು ಎಂಬ ಬೇಡಿಕೆ ಇರಿಸಿದ್ದಾರೆ ಎಂದು ವರದಿಯಾಗಿದೆ.

ಒಂದು ವೇಳೆ ಈ ಡೀಲ್‌ ಯಶಸ್ವಿಯಾದರೆ ಶಶಿಕಲಾ ಅವರನ್ನು ಇನ್ನೂ ಬೇಗ ಜೈಲಿಂದ ಬಿಡಿಸಲಾಗುವುದು ಎಂಬ ಭರವಸೆ ಲಭಿಸಿದೆ ಎಂದು ಮೂಲಗಳು ಹೇಳಿವೆ.

ಈ ನಡುವೆ, ವಿಲೀನ ಯತ್ನ ನಡೆಯುತ್ತಿದೆ ಎಂಬುದನ್ನು ಬಿಜೆಪಿ, ಅಣ್ಣಾಡಿಎಂಕೆ ಹಾಗೂ ಎಂಎಂಎಂಕೆ ಮೂಲಗಳು ಖಚಿತಪಡಿಸಿವೆ. ಡಿಎಂಕೆ ಬಗ್ಗುಬಡಿಯಲು ಇದು ಅವಶ್ಯ ಎಂದಿವೆ. ‘ಶಶಿಕಲಾ ಅಪರಾಧಿಯಲ್ಲ?’ ಎಂದು ಮಾಧ್ಯಮದವರು ಪ್ರಶ್ನಿಸಿದರೆ, ‘ಜೈಲುವಾಸ ಪೂರೈಸಿದರೆ ಕಳಂಕಮುಕ್ತರಾದಂತೆ’ ಎಂದು ಸಮರ್ಥಿಸಿಕೊಂಡಿವೆ.

ವಿಲೀನಕ್ಕೆ ಹಾತೊರೆತ:

ದಿನಕರನ್‌ಗೂ ವಿಲೀನ ಬೇಕಾಗಿದೆ. ಏಕೆಂದರೆ ಅವರ ಮೇಲೆ ಇ.ಡಿ. ಸೇರಿದಂತೆ ಹಲವು ತನಿಖಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಇನ್ನು ಜೈಲಿಂದ ಹೊರಬಂದ ನಂತರ ಶಶಿಕಲಾಗೂ ಒಂದು ಐಡೆಂಟಿಟಿ ಬೇಕಿದೆ. ಪಳನಿಸ್ವಾಮಿ-ಪನ್ನೀರಸೆಲ್ವಂಗೂ ಏಕಾಂಗಿಯಾಗಿ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಈ ಕಾರಣಕ್ಕೆ ಬಿಜೆಪಿ ಪೌರೋಹಿತ್ಯದಲ್ಲಿ ವಿಲೀನ ಯತ್ನಗಳು ಭರದಿಂದ ಸಾಗಿವೆ ಎಂದು ವರದಿ ತಿಳಿಸಿದೆ.


Spread the love

About Laxminews 24x7

Check Also

ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ:C.M.

Spread the love ರಾಜಣ್ಣ ರಾಜಕೀಯ ಮತ್ತು ಸಹಕಾರ ಎಂದರೆ ಜನಸೇವೆ ಎಂದು ಭಾವಿಸಿದ್ದಾರೆ: ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವುದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ