ಬೆಳಗಾವಿ, – ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ “ಲಕ್ಷ ಕಂಠಗಳಲ್ಲಿ” ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯಲ್ಲಿನ 2000 ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕರಾದ ಹಾಗೂ ಸಮೂಹ ಗಾಯನದ ಮಾಸ್ಟರ್ ಎಂದು ಪ್ರಸಿದ್ಧರಾದ ವಿನಾಯಕ ಮೋರೆಯವರು ಮಾಡಿದ್ದಾರೆ.
ಅ.28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇದರಲ್ಲಿ 1000 ವಿದ್ಯಾರ್ಥಿಗಳು ಸುವರ್ಣ ಸೌಧದಲ್ಲಿ ಹಾಗೆಯೇ ಇನ್ನುಳಿದವರು ಬೇರೆ ಬೇರೆ ಕಡೆ ಹಾಡಲಿದ್ದಾರೆ. ಸಂಗೀತ ಶಿಕ್ಷಕ ವಿನಾಯಕ ಮೋರೆ ಅವರು ನಗರದ ಎಲ್ಲ ಬಿ.ಎಡ್. ಕಾಲೇಜಿನ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಈ ಹಾಡುಗಳನ್ನು ಕಲಿಸಿದ್ದಾರೆ.
ಸರ್ಕಾರಿ ಬಿ.ಎಡ್ ಕಾಲೇಜು, ಎಮ್.ಎನ್.ಆರ್.ಎಸ್ ಕಾಲೇಜು, ಸಾಗರ ಬಿ.ಎಡ್ ಕಾಲೇಜು, ಕೆ.ಎಸ್.ಆರ್ ಕಾಲೇಜು, ಶೇಖ್ ಕಾಲೇಜು, ಸಿದ್ದರಾಮೇಶ್ವರ ಚಂದ್ರಗಿರಿ ಮಹಿಳಾ ಕಾಲೇಜು, ಸಂಗೊಳ್ಳಿ ರಾಯಣ್ಣ ಡಿಗ್ರಿ ಕಾಲೇಜು, ಪಂಡಿತ್ ನೆಹರು ಕಾಲೇಜು, ಜೀವನ ಜ್ಯೋತಿ ಶಾಲೆ, ಲವ್ ಡೇಲ್ ಸೆಂಟ್ರಲ್ ಸ್ಕೂಲ್, ಉಷಾತಾಯಿ ಗೊಗಟೆ ಹೈಸ್ಕೂಲ್ ಹೀಗೆ ಹಲವು ಶಾಲೆಗಳಲ್ಲಿ ಗೀತಗಾಯನ ನಡೆಯಲಿದೆ.
ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಕ್ಷಕ ವಿನಾಯಕ ಮೋರೆ ಇವರ ಸಂಗೀತದ ಯೋಗದಾನವಿರುತ್ತದೆ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಕಲಿಸಿದ ನಾಡ ಗೀತೆಯು ಇಂದಿಗೂ ಎಲ್ಲರಿಗೂ ನೆನಪಿನಲ್ಲಿದೆ.
ಸಂಗೀತ ಶಿಕ್ಷಕ ಮೋರೆ ಅವರಿಗೆ ಕನ್ನಡ ಮಾತನಾಡಲು ಬರುವುದಿಲ್ಲ ಮರಾಠಿ ಭಾಷಿಕರಾದರು ಸಹ ಕನ್ನಡ ಗೀತೆಗಳನ್ನು ಅತ್ಯಂತ ಪ್ರೀತಿಯಿಂದ ಪ್ರಭಾವ ಪೂರ್ವಕವಾಗಿ ಸ್ವತಃ ಹಾಡುತ್ತಾರೆ. ವಿದ್ಯಾರ್ಥಿಗಳಿಗೂ ಕಲಿಸುತ್ತಾರೆ.
Laxmi News 24×7