ಐಗಳಿ : ಇಲ್ಲಿಯ ಭೈರವನಾಥ ದೇವರ ಜಾತ್ರೆ ಫೆ. 5 ಹಾಗೂ 6ರಂದು ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಲಿವೆ.
ಫೆ.5ರಂದು ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ನಂತರ ಹಂದರ ಹಾಕುವುದು. ಮಧ್ಯಾಹ್ನ ದೇವರಿಗೆ ಮಹಾ ನೈವೇದ್ಯ ಅರ್ಪಿಸುವುದು, ಸಂಜೆಯಲ್ಲಿ ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ನಂತರ ಪಲ್ಲಕ್ಕಿ ಉತ್ಸವವು ವಿವಿಧ ವಾದ್ಯಗಳ ಮೂಲಕ ನಡೆಯಲಿದೆ. ರಾತ್ರಿ ಇಂಗಳಿ ಹಾಗೂ ಸತ್ತಿ ಗ್ರಾಮದವರಿಂದ ಡೊಳ್ಳಿನ ಪದಗಳು ಜರುಗಲಿವೆ.
6ರಂದು ಬೆಳಗಿನಜಾವ ಭಕ್ತರು ದೀರ್ಘದಂಡ ನಮಸ್ಕಾರ ಹಾಕಲಿದ್ದಾರೆ. ಅಭಿಷೇಕ, ಪೂಜೆ ಜರುಗಲಿದೆ. ಮಧ್ಯಾಹ್ನ ಬಸಪ್ಪ ಪೂಜಾರಿ ಅವರು ಮಳೆ ಬೆಳೆಗಳ ಬಗ್ಗೆ ನುಡಿಗಳನ್ನು ಹೇಳಲಿದ್ದಾರೆ. ನಂತರ ಮಹಾಪ್ರಸಾದವಿದೆ. ಸಂಜೆಯಲ್ಲಿ ದೇವರ ಪಲ್ಲಕ್ಕಿ ಉತ್ಸವದಿಂದ ಪೂಜಾರಿ ಮನೆಗೆ ತೆರಳಲಿದೆ ಎಂದು ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ