Breaking News

ಶ್ರೀರಾಮ ಸೇನೆ ಮುಖಂಡನ ಮೇಲೆ ಗುಂಡು: ತನಿಖೆ ಸಿಐಡಿಗೆ ಒಪ್ಪಿಸಿ ಎಂದ ಮುತಾಲಿಕ

Spread the love

ಬೆಳಗಾವಿ: ‘ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಮುರಿಯಬೇಕು ಎಂಬ ಉದ್ದೇಶದಿಂದಲೇ ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತಕರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಅಥವಾ ಸಿಐಡಿಗೆ ಒಪ್ಪಿಸಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಆಗ್ರಹಿಸಿದರು.

 

‘ಈ ಗುಂಡಿನ ದಾಳಿ ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಹೇಳುವ ಮೂಲಕ ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಇರುವುದು ಎದ್ದುಕಾಣುತ್ತಿದೆ. ರಾಜಕಾರಣಿಯ ಒತ್ತಡಕ್ಕೆ ಮಣಿದು ಪೊಲೀಸರು ತನಿಖೆ ಕೂಡ ನಡೆಸುತ್ತಿಲ್ಲ. ಎರಡು ಕೊಲೆಗಳಿಗೆ ಯತ್ನ ನಡೆಸಿದ ಪ್ರಕರಣವನ್ನೇ ಹಗುರವಾಗಿ ತೆಗೆದುಕೊಂಡಿದ್ದಾರೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಜನವರಿ 7ರಂದು ಗುಂಡಿನ ದಾಳಿ ನಡೆದಿದೆ. ರವಿ ಕೋಕಿತಕರ ಅವರ ಕಾರು ಈಗಲೂ ಪೊಲೀಸ್‌ ಠಾಣೆ ಆವರಣದಲ್ಲಿದೆ. ತಮಗೆ ತಾಗಿ ಕಾರಿನೊಳಗೆ ಬಿದ್ದಿದ್ದ ಗುಂಡನ್ನು ಸ್ವತಃ ರವಿ ಅವರೇ ಹುಡುಕಿಕೊಟ್ಟಿದ್ದಾರೆ. ಪೊಲೀಸರು ಕನಿಷ್ಠ ತಪಾಸಣೆ ಕೂಡ ಮಾಡಿಲ್ಲ, ಕಾರಿನೊಳಗೆ ಇಣುಕಿ ಕೂಡ ನೋಡಲ್ಲ. ಕಾರಿನಲ್ಲಿದ್ದ ಮೂವರು ಸೇರಿದಂತೆ ಅಕ್ಕಪಕ್ಕದವರ ಹೇಳಿಕೆ ಕೂಡ ಪಡೆದಿಲ್ಲ’ ಎಂದರು.

‘ದಾಳಿಕೋರರು ಒಂದು ಸ್ಕೂಟರ್‌, ಒಂದು ಬೈಕ್‌ ಮೇಲೆ ಬಂದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಸ್ಕೂಟರ್‌ ಮೇಲೆ ಬಂದ ಮೂವರು ತಾವಾಗೇ ಶರಣಾಗಿದ್ದಾರೆ. ಆದರೆ, ಬೈಕಿನಲ್ಲಿದ್ದವರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ. ಕ್ಯಾಂಪ್‌ ಠಾಣೆಗೆ ಹಾಜರಾಗಬೇಕಾದ ಆರೋಪಿಗಳನ್ನು ಕೆಲವರು ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದಾರೆ. ಇಂಥ ನಟೋರಿಯಸ್‌ ಕೈದಿಗಳನ್ನು ಕೇಂದ್ರ ಕಾರಾಗೃಹದಲ್ಲಿ ಇಡುವ ಬದಲು, ಬೈಲಹೊಂಗಲ ಉಪಕಾರಾಗೃಹಕ್ಕೆ ಕಳುಹಿಸಿದ್ದಾರೆ. ಇದೆಲ್ಲದರ ಹಿಂದೆ ರಾಜಕೀಯ ಕೈವಾಡವಿದೆ’ ಎಂದೂ ಆರೋಪಿಸಿದರು.

‘ಶಿಕ್ಷೆ ಪ್ರಮಾಣ ಕಡಿಮೆ ಆಗುವಂತೆ ಮಾಡುವ ಉದ್ದೇಶದಿಂದ ಪೊಲೀಸರು ಸೂಕ್ತ ಕಲಂಗಳನ್ನು ಹಾಕಿಲ್ಲ. ಇದೆಲ್ಲವನ್ನೂ ಗೃಹಸಚಿವ ಹಾಗೂ ರಾಜ್ಯಪಾಲರಿಗೆ ಮನವರಿಕೆ ಮಾಡುತ್ತೇವೆ. ಒಂದು ತಿಂಗಳಲ್ಲಿ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದೂ ಅವರು ಹೇಳಿದರು.

ದಾಳಿಗೆ ಒಳಗಾದ ರವಿ ಕೋಕಿತಕರ ಹಾಗೂ ಅವರ ವಕೀಲರು ಇದ್ದರು.


Spread the love

About Laxminews 24x7

Check Also

ಹೆಬ್ಬಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಶ್ರೀ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ ಸಂಘ’ದಿಂದ ಪೆನ್-ನೋಟ್’ಬುಕ್ ವಿತರಣೆ!

Spread the love ಹೆಬ್ಬಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ: ಸರ್ಕಾರಿ ಶಾಲಾ ಮಕ್ಕಳಿಗೆ ‘ಶ್ರೀ ಮಹರ್ಷಿ ವಾಲ್ಮೀಕಿ ಹಿತಾಭಿವೃದ್ಧಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ