ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಯುವತಿಯೊಬ್ಬಳ ಜತೆ ಮದ್ವೆ ಆಗುವ ಕನುಸು ಕಂಡಿದ್ದ ಬಳ್ಳಾರಿ ಜಿಲ್ಲೆಯ ಶಿಕ್ಷಕರೊಬ್ಬರಿಗೆ ಸಂಕಷ್ಟ ಎದುರಾಗಿದೆ. ನೀನಂದ್ರೆ ನನಗಿಷ್ಟ, ನಾನು ನಿನ್ನನ್ನೇ ಮದ್ವೆ ಆಗ್ತೀನಿ ಎಂದು ಹೇಳುತ್ತಿದ್ದಾಕೆಯ ಅಸಲಿ ಮುಖ ನಾಲ್ಕು ವರ್ಷದ ಬಳಿಕ ಬಯಲಾಗಿದ್ದು, ಶಿಕ್ಷಕನೀಗ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ.
ದೇವೆಂದ್ರಪ್ಪ ಮೋಸ ಹೋದವರು. ಇವರಿಗೆ ಈಗಾಗಲೇ ಬೇರೊಬ್ಬರೊಂದಿಗೆ ಮದುವೆ ಆಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ದೇವೇಂದ್ರಪ್ಪ, 2ನೇ ಮದುವೆ ಆಗಲು ಮ್ಯಾಟ್ರಿಮೋನಿಯಲ್ಲಿ ಪ್ರೊಪೈಲ್ ಹಾಕಿದ್ದರು. ಯುವತಿಯೊಬ್ಬಳು ತನಗೆ ಒಪ್ಪಿಗೆ ಇದೆ ಎಂದು ಫೋಟೋ ಹಾಗೂ ಪ್ರೊಪೈಲ್ ಕಳಿಸಿದ್ದಳು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು.
ನನ್ನ ಹೆಸರು ಹರಿತಾ, ಕೇರಳ ಮೂಲದವಳು. ನಾನೀನಗ ಎಂಬಿಬಿಎಸ್ ಓದುತ್ತಿರುವೆ ಎಂದು ಪರಿಚಯ ಹೇಳಿಕೊಂಡಿದ್ದಳು. ನಿಮ್ಮನ್ನು ಮದುವೆ ಆಗೋಕೆ ನಾನು ರೆಡಿ ಎಂದೂ ಹೇಳಿದ್ದಳು. ಚೆಂದ ಚೆಂದ ಫೋಟೋ ಕಳಿಸಿ ಶಿಕ್ಷಕನನ್ನು ಬಲೆಗೆ ಬೀಳಿಸಿಕೊಂಡಿದ್ದಳು. ಅಷ್ಟೇ ಅಲ್ಲ, ಮಾದಕ ಫೋಟೋ, ಉದ್ರೇಕಕಾರಿ ಮೆಸೇಜ್ ಕಳುಹಿಸಿ ಪುಸಲಾಯಿಸಿದ್ದಳು. ನಂತರ ತನ್ನ ಸ್ನೇಹಿತೆಯರನ್ನೂ ಫೋನ್ ಮೂಲಕ ಪರಿಚಯಿಸಿದ್ದಳು.
ನಂತರ ಕಷ್ಟ ಅಂತೇಳಿ ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಿದಳು. ನಿನ್ನನ್ನು ನೋಡಬೇಕು ಎಂದು ದೇವೇಂದ್ರಪ್ಪ ಹೇಳಿದರೆ ನೆಪ ಹೇಳುತ್ತಲೇ ವರ್ಷಗಟ್ಟಲೇ ತಳ್ಳಿಹಾಕಿದ್ದಳು. ನಾಲ್ಕೈದು ವರ್ಷದಲ್ಲಿ ಒಮ್ಮೆಯೂ ದೇವೆಂದ್ರಪ್ಪರನ್ನ ಭೇಟಿಯಾಗಿಲ್ಲ. ಮಾದಕ ನೋಟದ ಫೋಟೋಗಳು, ಉದ್ರೇಕಕಾರಿ ಮೆಸೇಜ್ಗೆ ಬೋಲ್ಡ್ ಆಗಿದ್ದ ದೇವೆಂದ್ರಪ್ಪ, ಯುವತಿ ಜಾಲದಲ್ಲಿ ಬಿದ್ದು ಯಾಮಾರಿದ್ದಾರೆ. ಇದೀಗ ಆಕೆ ಪ್ರೇಯಸಿಯಲ್ಲ, ಹಣ ಪೀಕುವ ವಂಚಕಿ. ತಾನು ಇಷ್ಟು ದಿನ ಬಿದ್ದದ್ದು ಮೋಸದ ಬಲೆಗೆ ಎಂದು ದೇವೇಂದ್ರಪ್ಪಗೆ ಜ್ಞಾನೋದಯ ಆಗಿದೆ.