ಎರಡು ದಿನಗಳ ಕರ್ನಾಟಕ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಡಿನ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದರು. ಮೈಸೂರಿಗೆ ಮೂರ್ನಾಲ್ಕು ಬಾರಿ ಆಗಮಿಸಿದ್ದರೂ, ಚಾಮುಂಡಿ ಬೆಟ್ಟಕ್ಕೆ ಮೋದಿ ಇದೇ ಮೊದಲ ಬಾರಿ ಭೇಟಿ ನೀಡಿದ್ದರು.
ದೇವಾಲಯದಲ್ಲಿ ಸುಮಾರು ಹದಿನೈದು ನಿಮಿಷ ಪ್ರಾರ್ಥನೆ ಸಲ್ಲಿಸಿದ್ದ ಮೋದಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ದೇವಾಲಯಕ್ಕೆ ಹಲವು ಗಣ್ಯರು ಭೇಟಿ ನೀಡಿದ್ದಾರೆ, ಆದರೆ ಮೋದಿಯವರಷ್ಟು ಸರಳತೆಯ ವ್ಯಕ್ತಿತ್ವವನ್ನು ನಾವು ಕಂಡಿಲ್ಲ ಎಂದು ದೇವಾಲಯದ ಪ್ರಧಾನ ಅರ್ಚಕರು ಹೇಳಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿಯಾದ ನಂತರ ಮುಂಬರುವ ಚುನಾವಣೆಯಲ್ಲಿ ಅವರ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಮೋದಿ, ಮೈಸೂರಿನಿಂದ ತೆರಳಿದ ಕೆಲವೇ ಹೊತ್ತಿನಲ್ಲಿ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ರಾಜ್ಯ ಭೇಟಿಯ ಮೊದಲ ದಿನ (ಜೂನ್ 20) ರಾತ್ರಿ ಪ್ರಧಾನಿ ಮೋದಿ ದೇವಾಲಯಕ್ಕೆ ತೆರಳಿದ್ದರು. ಮರುದಿನ ಯೋಗದಿನ ಮತ್ತು ಇತರ ಕಾರ್ಯಕ್ರಮದಲ್ಲಿ ಭಾಗವಹಿಸಿ ನವದೆಹಲಿಗೆ ವಾಪಸ್ ಆಗಿದ್ದರು. ಜ್ಯೋತಿಷಿ ಹೇಳಿದ್ದೇನು,
ಈಗ ರಾಜಕೀಯ ವಿಶ್ಲೇಷಕರೂ ಮತ್ತು ಜ್ಯೋತಿಷಿಯೂ ಆಗಿರುವ ಗುರುರಾಜ್ ಅಂಜನ್ ಎನ್ನುವವರು ಪ್ರಧಾನಿ ಮೋದಿಯ ಮೈಸೂರು ಭೇಟಿಯ ಬಗ್ಗೆ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಗುರುರಾಜ್ ಅವರು ಬರೆದುಕೊಂಡಿದ್ದು, “ಪ್ರಧಾನಿ ಮೋದಿಯವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ದಿನವೇ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಮುಂಬರುವ ಅಂದರೆ 2023ರ ಚುನಾವಣೆಗಳಲ್ಲಿ ಪ್ರಧಾನಿ ಮೋದಿಯವರು ಬಯಸಿದ ಫಲಿತಾಂಶ ಸಿಗುವುದಿಲ್ಲ ಮತ್ತು ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸಲಿದ್ದಾರೆ”ಎಂದು ಗುರುರಾಜ್ ಟ್ವೀಟ್ ಮಾಡಿದ್ದಾರೆ.