ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ ಬಂದು ನಿಂತಿದೆ. 4ನೇ ಅಭ್ಯರ್ಥಿಯ ಗೆಲುವಿಗೆ ಮೂರೂ ಪಕ್ಷಗಳಲ್ಲೂ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ. ಈ ನಡುವೆ ಜೆಡಿಎಸ್ನ ಕೆಲ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಚುನಾಣೆಯಲ್ಲಿ ತಮಗೆ ಬೆಂಬಲ ನೀಡುವಂತೆ ಕೇಳಿಕೊಂಡಿರುವುದು ಕುತೂಹಲ ಮೂಡಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳೂ 4ನೇ ಅಭ್ಯರ್ಥಿಯ ಗೆಲುವಿಗೆ ರಣತಂತ್ರ ರೂಪಿಸುತ್ತಿವೆ. ಜೆಡಿಎಸ್ ಪಾಳಯದಲ್ಲಿ ಆತಂಕ, ಗೊಂದಲ ಮುಂದುವರಿದಿದೆ. ಶತಾಯಗತಾಯ ಕಾಂಗ್ರೆಸ್ ಬೆಂಬಲ ಪಡೆದು ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕೆಂದು ಜೆಡಿಎಸ್ ಕಸರತ್ತು ನಡೆಸ್ತಿದೆ.
ಈ ಹಿನ್ನೆಲೆಯಲ್ಲಿ ಅವರ ಬೆಂಬಲವನ್ನೂ ಕೋರಲಾಗಿದೆ. ನಿಮ್ಮ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಪಡೆದು ನಮ್ಮ ಅಭ್ಯರ್ಥಿಗೆ ಗೆಲುವಿಗೆ ಸಹಕಾರ ಕೊಡುವಂತೆ ಜೆಡಿಎಸ್ ನಾಯಕರಾದ ಟಿ.ಎ.ಶರವಣ ಮತ್ತು ಬಿ.ಎಂ.ಫಾರೂಕ್ ಮನವಿ ಮಾಡಿಕೊಂಡಿದಾರೆ. ಆದ್ರೆ ಸಿದ್ದರಾಮಯ್ಯ ಯಾವುದೇ ಭರವಸೆ ಕೊಡದೇ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತಿಳಿಸೋದಾಗಿ ಹೇಳಿ ಕಳಿಸಿದ್ದಾರೆ.
ಇತ್ತ ಮೂರೂ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯದಿದ್ರೆ ಜೆಡಿಎಸ್ಗೆ ಅಡ್ಡ ಮತದಾನದ ಆತಂಕವೂ ಕಾಡ್ತಿದೆ. ಕಾಂಗ್ರೆಸ್ ಸಂಪರ್ಕದಲ್ಲಿರುವ ಜೆಡಿಎಸ್ ನ ಕೆಲ ಶಾಸಕರು ಅಡ್ಡ ಮತದಾನ ಮಾಡೋ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗ್ತಿದೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ನಾಳೆ ರಾತ್ರಿ ಸಿಂಗಾಪುರದಿಂದ ವಾಪಸ್ಸಾಗ್ತಿದ್ದಾರೆ. ಎಚ್ಡಿಕೆ ವಾಪಸ್ಸಾದ ಬಳಿಕ ಯಾವ ರಣತಂತ್ರ ಹೆಣೀತಾರೆ, ತಮ್ಮಪಕ್ಷದ ಶಾಸಕರನ್ನ ಹೇಗೆ ಕಟ್ಟಿಹಾಕ್ತಾರೆ ಅನ್ನೋ ಕುತೂಹಲ ಮನೆಮಾಡಿದೆ.