ಬೆಂಗಳೂರು, ಫೆ. 22: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರೆ ಹನ್ನೆರಡು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಹತ್ಯೆ ಹಿಟ್ ಲಿಸ್ಟ್ನಲ್ಲಿರುವ ಹಿಂದೂ ಮುಖಂಡರಿಗೆ ಬೆಂಗಳೂರು ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೂ ಹಾಗೂ ಬೆಂಗಳೂರಿಗೂ ಲಿಂಕ್ ಇರುವ ಸ್ಫೋಟಕ ವಿಚಾರ ಹೊರ ಬಿದ್ದಿದೆ. ಇದರ ಜಾಡು ಹಿಡಿದು ಹರ್ಷ ಕೊಲೆಗೆ ಬಳಸಿರುವ ಕಾರು ಎಲ್ಲಿಂದ ಬಂದಿದೆ. ಯಾರಿಗೆ ಸೇರಿದ್ದು, ಈ ಮತೀಯ ಶಕ್ತಿಗಳಿಗೆ ಹಣಕಾಸು ನೆರವು ನೀಡುತ್ತಿರುವರು ಯಾರು ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಹನ್ನೆರಡು ಮಂದಿಯ ಪೈಕಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ ಮಾತ್ರ ಬಂಧಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಒಬ್ಬ ಮುಗ್ಧನನ್ನು ಸಹ ಬಂಧಿಸಲು ಅವಕಾಶ ಮಾಡಿಕೊಡಲ್ಲ. ಇನ್ನು ಹರ್ಷ ಕೊಲೆಯೇ ಅಂತಿಮವಾಗಬೇಕು. ಈ ರೀತಿಯ ಹತ್ಯೆಗಳು ಮತ್ತೆ ಮರುಕಳಿಸಬಾರದು. ಹೀಗಾಗಿ ಈ ಕೃತ್ಯದ ಹಿಂದೆ ಯಾರಿದ್ದಾರೆ? ಕಾರು ಒದಗಿಸಿದವರು ಯಾರು? ಹಣಕಾಸು ನೆರವು ಕೊಟ್ಟವರು ಯಾರು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವತಃ ಹೇಳಿಕೆ ನೀಡಿದ್ದಾರೆ.
ಖಾಸಿಫ್ ಹೇಳಿಕೆ ಆಧರಿಸಿ ತನಿಖೆ:
ಹರ್ಷ ಕೊಲೆ ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿ ಖಾಸಿಫ್ ಹೇಳಿಕೆ ಆಧರಿಸಿ ಇಬ್ಬರನ್ನು ಬಂಧಿಸಿಲಾಗಿದೆ. ಆ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಹನ್ನೆರಡು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನೆಡಸಲಾಗುತ್ತಿದೆ. ಅದರಲ್ಲೂ ಹರ್ಷ ಕೊಲೆಗೆ ಹಣಕಾಸು ನೆರವು ನೀಡಿದವರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ.