ನವದೆಹಲಿ: ಧಾರವಾಡದಲ್ಲಿರುವ ವಿಶೇಷ ಕೋರ್ಟ್ʼನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮತ್ತು ಇತರ ಇಬ್ಬರ ವಿರುದ್ಧ ಆರೋಪ ಪಟ್ಟಿಯನ್ನ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ವಿನಯ ಕುಲಕರ್ಣಿ ಚಂದ್ರಶೇಖರ ಇಂಡಿ ಮತ್ತು ಶಿವಾನಂದ ಬಿರಾದಾರ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ.
2016ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಆರೋಪಿಗಳು ಮೃತನ ಜೊತೆಗೆ ರಾಜಕೀಯ ಮತ್ತು ವೈಯಕ್ತಿಕ ದ್ವೇಷ ಹೊಂದಿದ್ದರು. ಮಾಜಿ ಸಚಿವರು ತನ್ನ ಸಹಚರರ ಜೊತೆಗೂಡಿ ಸಂಚು ನಡೆಸಿದ್ದರು. ಇದರ ಭಾಗವಾಗಿ ಒಬ್ಬ ಸಹಚರ ಕೃತ್ಯ ಎಸಗಿದ್ದ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಲಾಗಿದೆ.
ಇನ್ನು ಆರೋಪಪಟ್ಟಿಯಲ್ಲಿ, ಕೃತ್ಯ ಎಸಗಿದವರು ಬೆಂಗಳೂರಿನಿಂದ ಬಂದಿದ್ದು, ಕುಲಕರ್ಣಿ ಅವರ ಆಪ್ತರು ಮಾಲೀಕರಾಗಿದ್ದ ರೆಸಾರ್ಟ್ ಒಂದರಲ್ಲಿ ಜೂನ್ 7, 2016ರಂದು ತಂಗಿದ್ದರು. ಅದೇ ದಿನ ಕೊಲೆ ಎಸಗಲು ಮೊದಲ ಯತ್ನವೂ ನಡೆದಿತ್ತು ಎಂದಿದೆ.