ಚಿಕ್ಕೋಡಿ: ದನದಕೊಟ್ಟಿಗೆ ನಿರ್ಮಾಣದ ಹಣ ಮಂಜೂರಾಗದ ಹಿನ್ನೆಲೆ ಬೇಸತ್ತ ರೈತರೊಬ್ಬರು ಗ್ರಾಮ ಪಂಚಾಯತ್ ಕಚೇರಿ ಒಳಗೆ ಎಮ್ಮೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮ ಪಂಚಾಯತ್ ಒಳಗೆ ಸತೀಶ ಕೋಳಿ ಎಂಬ ರೈತ ಎಮ್ಮೆ ಕಟ್ಟಿ ಆಕ್ರೋಶ ಹೊರಹಾಕಿದ್ದಾರೆ. ‘ಕಳೆದ ವರ್ಷ ಗ್ರಾಮ ಪಂಚಾಯತ್ ವತಿಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು. ಆದರೆ, ನಿರ್ಮಾಣ ಮಾಡಿ ವರ್ಷ ಕಳೆದರೂ ಇದುವರೆಗೂ ಹಣ ಬಾರದೇ ಇರುವುದಕ್ಕೆ ಆಕ್ರೋಶಗೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದಾಗಿ’ ದೂರಿದ್ದಾರೆ.ಪಂಚಾಯತ್ ಒಳಗೆ ಎಮ್ಮೆ ಕಟ್ಟಿದ ರೈತ: ಸಂಬರಗಿ ಗ್ರಾಮ ಪಂಚಾಯತ್ ಕಚೇರಿ ಒಳಗಿನ ಕಿಟಕಿಗೆ ರೈತ ಎಮ್ಮೆ ಕಟ್ಟಿದ್ದಾರೆ. ಜೊತೆಗೆ ಅಲ್ಲೇ ಎಮ್ಮೆಗೆ ಮೇವು ಹಾಕಿ ಗ್ರಾಪಂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಘಟನೆ ಮಾಹಿತಿ ಅರಿತು ಅಥಣಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಗೊಂದಲ ಸರಿ ಪಡಿಸಿದರು.
ಇದೇ ಸಂದರ್ಭದಲ್ಲಿ ರೈತ ಸತೀಶ್ ಕೋಳಿ ಮಾತನಾಡಿ, ‘ನೋಡ್ರಿ ನಾವು ರೈತರು, ಸರ್ಕಾರ ರೈತರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆ ರೂಪಿಸಿದೆ. ಆದರೆ, ನನಗೆ ಕಳೆದ ವರ್ಷ ಸಂಬರಗಿ ಗ್ರಾಮ ಪಂಚಾಯತ್ನಿಂದ ಐವತ್ತು ಸಾವಿರ ರೂಪಾಯಿ ವೆಚ್ಚದ ದನದ ಶೆಡ್ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಆದರೆ, ನಿರ್ಮಾಣ ಮಾಡಿ ಒಂದು ವರ್ಷ ಕಳೆದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನಿಮಗೆ ಮಂಜೂರು ಮಾಡಿರುವ ಯೋಜನೆ ರದ್ದಾಗಿದೆ ಎಂದು ಹೇಳುತ್ತಾರೆ. ನಿರ್ಮಾಣ ಸಮಯದಲ್ಲಿ ಇಂಜಿನಿಯರ್ ಬಂದು ಫೋಟೋ ತೆಗೆದುಕೊಂಡು ಹೊಗಿದ್ದಾರೆ, ನಾನು ಸಾಲ ಸೋಲ ಮಾಡಿ ಇದನ್ನು ನಿರ್ಮಾಣ ಮಾಡಿದ್ದೇನೆ. ಸಾಲ ಕೊಟ್ಟವರು ಹಣ ಕೇಳುತ್ತಿದ್ದಾರೆ, ನಾನು ಎಲ್ಲಿಂದ ಹಣ ಕೊಡಲಿ, ಅಧಿಕಾರಿಗಳು ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ತೀರ್ಮಾನಕ್ಕೆ ಬಂದಿರುವೆ’ ಎಂದರು.