ಬೆಳಗಾವಿ: ‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ ತುಂಬಿದೆ. ಸರ್ಕಾರಿ ಮಾರ್ಗಸೂಚಿಯಂತೆ, ಅರ್ಥಪೂರ್ಣವಾಗಿ ಅಧಿವೇಶನದ ಶತಮಾನೋತ್ಸವ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶತಮಾನೋತ್ಸವ ಆಚರಣೆಗೆ ಸರ್ಕಾರ ಬಜೆಟ್ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು’ ಎಂದರು.
‘ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕರಿಸಿದ್ದ ಗೊತ್ತುವಳಿಗಳ ಕಿರುಹೊತ್ತಿಗೆ ಪ್ರಕಟಿಸಬೇಕು. ಅಧಿವೇಶನದ ಮಹತ್ವ ಸಾರಲು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಬೇಕು’ ಎಂದು ಹಿರಿಯರಾದ ದಿಲೀಪ್ ಕಾಮತ್ ಸಲಹೆ ನೀಡಿದರು.
ಸಾಹಿತಿ ಸರಜೂ ಕಾಟ್ಕರ್, ‘ರಾಜ್ಯದಾದ್ಯಂತ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಧಿವೇಶನದ ದಾಖಲೆಗಳು, ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು. ಟಿಳಕವಾಡಿಯ ವೀರಸೌಧ ಪುನರುಜ್ಜೀವನಗೊಳಿಸಬೇಕು’ ಎಂದರು.
‘ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಕಾರಣೀಕರ್ತರಾದ ಗಂಗಾಧರರಾವ್ ದೇಶಪಾಂಡೆ ಸ್ಮರಿಸುವ ಕಾರ್ಯಕ್ರಮವನ್ನೂ ಇದರಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಶತಮಾನೋತ್ಸವದ ಅನುದಾನದಲ್ಲಿ ₹50 ಲಕ್ಷ ಒದಗಿಸಬೇಕು’ ಎಂದು ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ರವೀಂದ್ರ ದೇಶಪಾಂಡೆ, ಕಾರ್ಯದರ್ಶಿ ಸುಭಾಷ ಕುಲಕರ್ಣಿ ಮನವಿ ಮಾಡಿದರು.