ದಾಂಡೇಲಿ: ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು ಹಿಂದೂಪರ ಸಂಘಟನೆಗಳ ಆಗ್ರಹ ಹಾಗೂ ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಿದ ಘಟನೆ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ.
ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿಗಾಗಿ ಎಂದು ಅನುಮಾನಿಸಿ ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಖಾಲಿ ಜಾಗದಲ್ಲಿ ಕಟ್ಟಿ ಇಟ್ಟಿರಬಹುದೆಂದು ಹಿಂದೂಪರ ಸಂಘಟನೆಯವರು ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ.
ಆರಂಭದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗೋವುಗಳ ರಕ್ಷಣೆಗೆ ಆಗ್ರಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಅಕ್ರಮವಾಗಿ ಕಟ್ಟಿಟ್ಟಿದ್ದ ಜಾನುವಾರುಗಳನ್ನು ನಮಗೊಮ್ಮೆ ನೋಡಲು ಬಿಡಿ ಎಂದು ಪೊಲೀಸರಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ ಭೀಮಣ್ಣ ಎಂ ಸೂರಿ ಅವರು ಇಲ್ಲಿ ಅಕ್ರಮವಾಗಿ ಕಟ್ಟಿರುವ ಜಾನುವಾರುಗಳನ್ನು ವಧೆ ಮಾಡಲು ಅವಕಾಶವಿಲ್ಲ. ಪಶು ವೈದ್ಯರನ್ನು ಕರೆಸಿ ಎಲ್ಲಾ ಜಾನುವಾರುಗಳನ್ನು ಪರಿಶೀಲಿಸಿ, ಅವರಿಂದ ವರದಿಯನ್ನು ಪಡೆದುಕೊಳ್ಳಲಾಗುವುದು. ಎಲ್ಲ ಜಾನುವಾರುಗಳ ಬಗ್ಗೆ ಅಗತ್ಯ ದಾಖಲಾತಿಗಳನ್ನು ಪಡೆದುಕೊಂಡು ಅವುಗಳ ರಕ್ಷಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದರು. ಆನಂತರ ಪಶು ವೈದ್ಯರು ಸ್ಥಳಕ್ಕೆ ಬಂದು ಜಾನುವಾರುಗಳ ವಯಸ್ಸು, ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಿದರು.