ಬೆಳಗಾವಿ: ಮಳೆಗಾಲ ಮತ್ತೆ ಬಂದಿದೆ. 2024-25ನೇ ಸಾಲಿನ ತರಗತಿಗಳ ಆರಂಭಕ್ಕೆ ಒಂದೇ ವಾರ ಬಾಕಿ ಇದೆ. ಈ ಮಧ್ಯೆ, ಮುಂಗಾರು ಪೂರ್ವದಲ್ಲಿ ಜೋರಾಗಿ ಸುರಿಯುತ್ತಿರುವ ಮಳೆ- ಗಾಳಿಯಿಂದ ಶಾಲೆಗಳ ಪತ್ರಾಸ್ ಹಾರಿಹೋಗುವುದು, ಗೋಡೆ ಕುಸಿಯುವುದು ಸಾಮಾನ್ಯವಾಗಿದೆ.
ಆದರೆ, ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಶಿಥಿಲ ಕೊಠಡಿಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
ಈ ವರ್ಷವೂ ವಿದ್ಯಾರ್ಥಿಗಳು ಅದೇ ಕೊಠಡಿಗಳಲ್ಲೇ ಆತಂಕದಿಂದ ಓದುವುದು ತಪ್ಪಿಲ್ಲ.
ಇತ್ತೀಚೆಗೆ ಸುರಿದ ಮಳೆ, ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ವಿವಿಧ ಶಾಲೆಗಳಲ್ಲಿ ಅವಾಂತರ ನಡೆಯುತ್ತಲೇ ಇವೆ. ಆದರೆ, ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಹೆಜ್ಜೆಯಿಟ್ಟಿಲ್ಲ.
2019ರಲ್ಲಿ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿದಿದ್ದರಿಂದ ಸರ್ಕಾರಿ ಶಾಲೆಗಳ ಕೊಠಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಬಳಿಕ ಮಳೆಯಿಂದಲೂ ಹಲವು ಕೊಠಡಿಗಳು ಹಾಳಾಗಿದ್ದವು. ಆದರೆ, ಈವರೆಗೆ ಹಲವು ಕೊಠಡಿಗಳಿಗೆ ದುರಸ್ತಿ ಕಂಡಿಲ್ಲ. ಮಳೆಗಾಲಕ್ಕೂ ಮುನ್ನ, ಶಿಥಿಲಗೊಂಡ ಶಾಲೆಗಳ ಚಿತ್ರಣ ಬದಲಾಗಬಹುದೆಂಬ ಪಾಲಕರ ನಿರೀಕ್ಷೆಯೂ ಹುಸಿಯಾಗಿದೆ.
ಅರಣ್ಯದಂಚಿನ ಗ್ರಾಮಗಳಲ್ಲಿ ಸಮಸ್ಯೆ:
ಖಾನಾಪುರ: ಬಹುಪಾಲು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಿಂದ ಆವೃತ್ತವಾದ ಖಾನಾಪುರ ತಾಲ್ಲೂಕಿನ 16 ಪ್ರಾಥಮಿಕ ಶಾಲೆಗಳ ಕೊಠಡಿ ಕಳೆದ ವರ್ಷ ಅತಿವೃಷ್ಟಿಯಿಂದ ಶಿಥಿಲಗೊಂಡಿವೆ.
ತಾಲ್ಲೂಕಿನಲ್ಲಿ 328 ಪ್ರಾಥಮಿಕ ಹಾಗೂ 72 ಪ್ರೌಢಶಾಲೆ ಇವೆ. ನರೇಗಾ ಯೋಜನೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಹಳೆಯ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ ಹಲವು ಶಾಲೆಗಳು ಅಭಿವೃದ್ಧಿಗೊಂಡಿವೆ. ಆದರೆ, ಶಿಥಿಲಗೊಂಡ ಶಾಲೆಗಳ ಸ್ಥಿತಿ ಸುಧಾರಣೆಯಾಗಿಲ್ಲ.
ಖಾನಾಪುರ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ, ತಾಲ್ಲೂಕಿನ ಗರ್ಲಗುಂಜಿ, ಮುಡೇವಾಡಿ, ಇಟಗಿ, ಗಂದಿಗವಾಡ, ಬೀಡಿ, ನಂದಗಡ, ಲಿಂಗನಮಠ ಸರ್ಕಾರಿ ಶಾಲೆಗಳ ಕೊಠಡಿ ಶಿಥಿಲವಾಗಿದ್ದು, ಮಕ್ಕಳು ಆತಂಕದಲ್ಲೇ ಓದುವ ಅನಿವಾರ್ಯತೆ ಸೃಷ್ಟಿಯಾಗಿದೆ.
‘ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿಯಿಂದ ಶಿಥಿಲಗೊಂಡ ವಿವಿಧ ಶಾಲೆಗಳ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆಲವು ಶಾಲೆಗಳ ಕೊಠಡಿ ದುರಸ್ತಿ ಮಾಡಲಾಗಿದೆ’ ಎಂದು ಬಿಇಒ ಕಚೇರಿ ಮೂಲಗಳು ತಿಳಿಸಿವೆ.