ಬೆಂಗಳೂರು: ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ಘಟನೆಯ ಸಂಬಂಧ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ರೌಡಿ ಶೀಟರ್ ತೆರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಹೀಗೆ ಮಾಡಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂಬುದಾಗಿ ಬಿವೈ ವಿಜಯೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಕ್ಕೆ ಆದ ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಿದ್ದ ಹನುಮಭಕ್ತರ ವಿರುದ್ಧ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಲು ಪೊಲೀಸರು ವಹಿಸಿರುವ ಕ್ರಮ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣಕ್ಕೆ ದುರ್ಬಳಕೆಯಾಗುತ್ತಿರುವ ಕಾನೂನು ಅಸ್ತ್ರವಾಗಿದೆ ಎಂದಿದ್ದಾರೆ.
ಗ್ರಾಮೀಣ ಭಾಗದ ಹನುಮ ಭಕ್ತರು ತಮ್ಮ ಭಾವನೆಗಳನ್ನು ಘಾಸಿಗೊಳಿಸಿದ ಆಡಳಿತ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದು ನಿರೀಕ್ಷಿತ ಘಟನೆಯಾಗಿದೆ. ಆದರೆ ಹಿಂದೂ ಶ್ರದ್ಧೆಯ ಭಕ್ತರು ಹಾಗೂ ಸಂಘಟನೆಗಳ ಕಾರ್ಯಕರ್ತರುಗಳಿಗೆ ಗೂಂಡಾಗಿರಿ ಹಣೆಪಟ್ಟಿ ಕಟ್ಟಲು ಪೊಲೀಸರು ನೋಟೀಸ್ ನೀಡಿರುವುದು ಅತ್ಯಂತ ಖಂಡನೀಯ ಎಂಬುದಾಗಿ ಹೇಳಿದ್ದಾರೆ.
ಹನುಮಧ್ವಜ ಘಟನೆಯಲ್ಲಿ ಪ್ರತಿಭಟಿಸಿದವರ ಮೇಲೆ ರೌಡಿಶೀಟರ್ ತೆರೆದದ್ದೇ ಆದಲ್ಲಿ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಕರ್ತರ ಪರ ಹೋರಾಟಕ್ಕಿಳಿಯಲಿದೆ ಎಂದು ಸರ್ಕಾರವನ್ನು ಎಚ್ಚರಿಸುತ್ತೇವೆ.